ಬೆಂಗಳೂರು: ದಲಿತರು ಏನೇ ಮಾಡಿದರೂ ಮತ ನೀಡುತ್ತಾರೆ ಎಂದು ತಿಳಿದಿದ್ದೀರಾ ? ಮುಖ್ಯಮಂತ್ರಿಸಿದ್ದರಾಮಯ್ಯ(Siddaramaiah) ಅವರು ದಲಿತರ ಪರ ಅಂತ ಹೇಳುತ್ತಾರೆ. ಆದರೆ ಸಿದ್ದರಾಮಯ್ಯ ದಲಿತರ ಹಿತ ಕಡೆಗಣಿಸಿದ್ದಾರೆ. ಎಸ್ಸಿಪಿ (SCP), ಟಿಎಸ್ಪಿ (TSP) ಹಣದ ಮೇಲೆ ಕಾಂಗ್ರೆಸ್ (Congress) ವಕ್ರದೃಷ್ಟಿ ಬಿದ್ದಿದೆ. ಸರ್ಕಾರ ಶಕ್ತಿ ಯೋಜನೆಗೆ ಎಸ್ಸಿಪಿ, ಟಿಎಸ್ಪಿ ಹಣ ಬಳಸುತ್ತಿದ್ದಾರೆ. ಬಸ್ ಹತ್ತುವವರನ್ನು ನೀವು ಎಸ್ಸಿ, ಎಸ್ಟಿ ಎಂದು ಕೇಳುತ್ತೀರಾ? ಯಾವ ಗೃಹಿಣಿ ಎಸ್ಸಿ, ಯಾವ ಗೃಹಿಣಿ ಎಸ್ಟಿ ಎಂದು ಗುರುತಿಸುತ್ತೀರಿ ? ದಲಿತರಿಗೆ 11 ಸಾವಿರ ಕೋಟಿ ರೂ. ಅನುದಾನ ಕೊರತೆ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ (Basavaraj Bommai) ವಾಗ್ದಾಳಿ ಮಾಡಿದರು.
ಎಸ್ಸಿಪಿ, ಟಿಎಸ್ಪಿ ಯೋಜನೆಗಳಿಗೆ ಮೀಸಲಿಟ್ಟ ಹಣವನ್ನು ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿರುವುದನ್ನು ವಿರೋಧಿಸಿ ಫ್ರೀಡಂ ಪಾರ್ಕ್ನಲ್ಲಿ ಇಂದು (ಜು.04) ಬಿಜೆಪಿ ಪ್ರತಿಭಟನೆ ನಡೆಸಿತು. ಈ ವೇಳೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ ಈ ಹಣ ಇದ್ದಿದ್ದರೆ ಸಾವಿರಾರು ಗಂಗಾ ಕಲ್ಯಾಣ, ವಸತಿ ನಿಲಯ ನಿರ್ಮಾಣ ಮಾಡಬಹುದಿತ್ತು. ಮತ್ತು ಸ್ವಯಂ ಉದ್ಯೋಗ ಆಗುತ್ತಿತ್ತು. ಇದೀಗ ದಲಿತರಿಗೆ 11 ಸಾವಿರ ಕೋಟಿ ರೂ. ಕೊರತೆ ಆಗಿದೆ. ಸಾಲ ಮಾಡಿ ಗ್ಯಾರಂಟಿಗೆ ಹಣ ನೀಡಬೇಕಿತ್ತು. ದಲಿತರ ಹಣವನ್ನು ಗ್ಯಾರಂಟಿಗಳಲ್ಲಿ ಬಳಕೆ ಮಾಡಿ ಯೋಜನೆಗಳನ್ನು ಹೇಗೆ ಅದೇ ಸಮುದಾಯಕ್ಕೆ ತಲುಪಿಸ್ತೀರಿ? ಯಾರು ದಲಿತರು, ಯಾರು ದಲಿತರು ಅಲ್ಲ ಅಂತ ಗ್ಯಾರಂಟಿ ಫಲಾನುಭವಿಗಳಲ್ಲಿ ಹೇಗೆ ಗುರಿತಿಸುತ್ತೀರಿ ? ಸರ್ಕಾರ ದಲಿತರಿಗೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.