ಬೆಂಗಳೂರು: ಪ್ರತಿ ದಿನ ಶೇ.1 ರಷ್ಟು ಶಕ್ತಿ ಯೋಜನೆ ದುರ್ಬಳಕೆ ಆಗ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಶಾಂತಿನಗರ ಬಿಎಂಟಿಸಿ ಕಚೇರಿಯಲ್ಲಿಂದು ಮಾತನಾಡಿದ ಅವರು, “ಪ್ರತಿ ನಿತ್ಯ 1 ಕೋಟಿ 39 ಲಕ್ಷ ಪ್ರಯಾಣಿಕರು ಓಡಾಟ ಮಾಡ್ತಿದ್ದಾರೆ. ಇದರಲ್ಲಿ ಶೇ.1 ರಷ್ಟು ಮಿಸ್ಯೂಸ್ ಆಗ್ತಿದೆ” ಎಂದು ತಿಳಿಸಿದರು.
“749.30 ಕೋಟಿ ರೂ ಮೌಲ್ಯದ ಟಿಕೆಟ್ ನೀಡಲಾಗಿದೆ. ಪ್ರತಿನಿತ್ಯ ಸರಾಸರಿ 59.55 ಲಕ್ಷ ಮಹಿಳಾ ಪ್ರಯಾಣಿಕರು ಓಡಾಡಿದ್ದಾರೆ. ಶಕ್ತಿ ಜಾರಿ ಬಳಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಯೋಜನೆ ಜಾರಿಗೂ ಮೊದಲು 84.91 ಲಕ್ಷ ಇದ್ದ ಪ್ರಯಾಣಿಕರ ಸಂಖ್ಯೆ ಯೋಜನೆ ಜಾರಿಯಾದ ಬಳಿಕ 109.95 ಲಕ್ಷಕ್ಕೆ ಏರಿಕೆಯಾಗಿದೆ” ಎಂದರು.
“ಇದೇ ರೀತಿ ಮುಂದುವರೆದರೆ ಈ ವರ್ಷದ ಅಂತ್ಯದಲ್ಲಿ ಸಾರಿಗೆ ನಿಗಮದ ಸಾಲ ತೀರುತ್ತೆ. ಶಕ್ತಿ ಯೋಜನೆಯಿಂದ ಮುಂದಕ್ಕೆ ಸಾರಿಗೆ ನಿಗಮಗಳಿಗೂ ಲಾಭ ಆಗಲಿದೆ. ಒಟ್ಟು ಸಾರಿಗೆ ನಿಗಮಕ್ಕೆ 4,352 ಕೋಟಿ ರೂಪಾಯಿ ಸಾಲ ಇದೆ. ಶಕ್ತಿ ಯೋಜನೆಯಿಂದ ಪ್ರತಿ ತಿಂಗಳು ನಿಗಮಗಳು ಸಾಲ ತೀರಿಸೋಕೆ ಸಾಧ್ಯ ಆಗುತ್ತಿದೆ. ಈ ವರ್ಷದ ಅಂತ್ಯಕ್ಕೆ ಎಲ್ಲ ಸಾಲ ತೀರಿ, ಲಾಭದ ಟ್ರ್ಯಾಕ್ಗೆ ನಿಗಮಗಳು ಮರಳಲಿದೆ” ಎಂದರು.
“ಹಣಕಾಸು ಇಲಾಖೆ ಯಾವುದೇ ಇಲಾಖೆ ಕೇಳಿದ ತಕ್ಷಣ ಹಣ ಕೊಡುವುದಿಲ್ಲ. ಅವರು ಒಂದಷ್ಟು ಕ್ಲಾರಿಫಿಕೇಷನ್ ಕೇಳಿದ್ದಾರೆ. ಬೊಮ್ಮಯಿ ಸಾಹೇಬ್ರಿಗೆ ತುಂಬ ಆತುರ. ಹೊಸ ಸರ್ಕಾರ ಬಂದಿದೆ ಸ್ವಲ್ಪ ದಿನ ಬಿಡೋಣ ಅನ್ನಲ್ಲ. ನೀರಿಂದ ಮೀನು ಹೊರಗಡೆ ತೆಗೆದು ಹಾಕಿದ್ರೆ ಯಾವ ರೀತಿ ಒದ್ದಾಡುತ್ತೋ, ಆ ರೀತಿ ಬಿಜೆಪಿ ಪಕ್ಷದವರು ವಿಲವಿಲ ಅಂತ ಒದ್ದಾಟ ನಡೆಸುತ್ತಿದ್ದಾರೆ” ಎಂದು ರೆಡ್ಡಿ ಟೀಕಿಸಿದರು