ಚಿಕ್ಕೋಡಿ: ಜಿಲ್ಲೆಯ ಕೆಲ ಭಾಗಗಳಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆ ಸುರಿದ ಪರಿಣಾಮವಾಗಿ ಅಥಣಿ, ಕಾಗವಾಡ, ರಾಯಭಾಗ, ಭಾಗದಲ್ಲಿ ಬರಗಾಲ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ದನಕರುಗಳಿಗೆ ಮೇವು ಇಲ್ಲದೇ ಸೊರಗಿವೆ. ಇದನೆಲ್ಲ ನೋಡಿದ ರೈತರು ಸರ್ಕಾರಕ್ಕೆ ಈ ಭಾಗದಲ್ಲಿ ಗೋಶಾಲೆ ಪ್ರಾರಂಭಕ್ಕೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ರೈತರೊಬ್ಬರು ತಾವು ಬೆಳೆದ ಬೆಳೆಯನ್ನು ಕಟಾವು ಮಾಡಿ ಅಕ್ಕಪಕ್ಕದ ಗ್ರಾಮದ ದನಕರುಗಳಿಗೆ ಉಚಿತವಾಗಿ ಮೇವು ವಿತರಣೆ ಮಾಡುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದ ರೈತ ಶಿವಗೌಡ ಮಸರಗುಪ್ಪಿ ಎಂಬುವರು ತಾವು ಬೆಳೆದ ಬೆಳೆಗಳನ್ನು ದನಕರುಗಳಿಗೆ ಉಚಿತವಾಗಿ ನೀಡಿ ಮೂಕ ಪ್ರಾನಿಗಳ ಹಸಿವನ್ನು ನೀಗಿಸುತ್ತಿದ್ದಾರೆ. ಈ ಭಾಗದಲ್ಲಿ ಮಳೆ ಕೊರತೆಯಿಂದಾಗಿ ಹಲವು ಬೆಳೆಗಳಲ್ಲಿ ಕುಂಠಿತವಾಗಿದೆ ಹಾಗೂ ಭಾಗಶಃ ಬೆಳೆಗಳು ಒಣಗಿ ಹೋಗಿದ್ದರಿಂದ ಸದ್ಯ ಈಗ ಮೇವಿನ ಹಾಹಾಕಾರ ಉಂಟಾಗಿದ್ದು, ಇದರಿಂದ ದನಕರುಗಳಿಗೆ ಮೇವು ಇಲ್ಲದೇ ಬಳಲುವಂತಾಗಿತ್ತು. ಆದರೆ, ರೈತ ಶಿವನಗೌಡ ಯಾವುದೇ ಹಣವನ್ನು ಅಪೇಕ್ಷಿಸದೇ ತಾವು ಬೆಳೆದ ನಾಲ್ಕು ಎಕರೆ ಪ್ರದೇಶದ ಕಬ್ಬು ಬೆಳೆಯನ್ನು ರೈತರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.