ಮೈಸೂರು: ಉದ್ಯೋಗಿಕಾಂಕ್ಷಿಗಳಿಗೆ ಭಾರತೀಯ ಸೇನಾ ಇಲಾಖೆ ಸಿಹಿ ಸುದ್ದಿ ನೀಡಿದೆ. ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಅಗ್ನಿವೀರ್ ಯೋಜನೆಯಡಿ ಸೇನಾ ನೇಮಕಾತಿ ರ್ಯಾಲಿ ಇಂದಿನಿಂದ ಆರಂಭವಾಗಿದೆ.
ನಾಲ್ಕು ದಿನಗಳ ಕಾಲ ಈ ನೇಮಕಾತಿ ರ್ಯಾಲಿ ನಡೆಯಲಿದೆ. ಸೇನಾ ನೇಮಕಾತಿ ರ್ಯಾಲಿಯ ಮೊದಲನೇ ದಿನವಾದ ಇಂದು 559 ಮಂದಿಗೆ ದೈಹಿಕ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ ಆಯ್ಕೆಯಾದ 492 ಮಂದಿ ಮುಂದಿನ ಪ್ರಕ್ರಿಯೆಯಲ್ಲಿ ಭಾಗವಹಿಸಿದರು. ಇವರನ್ನು 5 ಬ್ಯಾಚ್ಗಳಾಗಿ ವಿಂಗಡಣೆ ಮಾಡಿ ಪ್ರತಿ ಬ್ಯಾಚ್ನಿಂದ 90 ಮಂದಿಯಂತೆ 1600 ಮೀಟರ್ ಓಟ, 9 ಅಡಿ ಉದ್ದ ಜಿಗಿತ, ಜಿಗ್ ಜಾಗ್ ಬ್ಯಾಲೆನ್ಸ್ ಸೇರಿದಂತೆ ಹಲವು ಪರೀಕ್ಷೆಗಳನ್ನು ನಡೆಸಲಾಯಿತು.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ ಈ ರ್ಯಾಲಿಯಲ್ಲಿ ಭಾಗವಹಿಸಿರುವ ಅಭ್ಯರ್ಥಿಗಳು ಈಗಾಗಲೇ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರನ್ನು ಅಗ್ನಿವೀರ್ ರ್ಯಾಲಿಯಲ್ಲಿ ಮೊದಲ ದಿನ ಕ್ರೀಡಾ ಚಟುವಟಿಕೆ ಹಾಗೂ ಎರಡನೇ ದಿನ ದೈಹಿಕ ಪರೀಕ್ಷೆಗೆ ಒಳಪಡಿಸಲಾಗುವುದು. ಇನ್ನು ರ್ಯಾಲಿಗೆ 14 ಜಿಲ್ಲೆಗಳ 1723 ಸೇನಾ ಉದ್ಯೋಗಾಕಾಂಕ್ಷಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಅಗ್ನಿವೀರ್ ನೇಮಕಾತಿ ಅಧಿಕಾರಿ ಗೌರವ್ ತಾಪ ಮಾಹಿತಿ ನೀಡಿದರು.