ಬೆಂಗಳೂರು: ಐಟಿಬಿಟಿ ಇಲಾಖೆ ರಾಜ್ಯದ ಎಲ್ಲಾ ಸ್ಟಾರ್ಟ್ ಅಪ್ ಸಂಸ್ಥೆಗಳ ಸಮಸ್ಯೆ, ಬೇಡಿಕೆಗಳನ್ನು ತಿಳಿದುಕೊಳ್ಳಲು ಸರ್ವೆ ಮಾಡಲು ಮುಂದಾಗಿದೆ.
ಆನ್ಲೈನ್ ಮೂಲಕ ಸರ್ವೆ ಕಾರ್ಯ ನಡೆಸಲಿರುವ ಐಟಿಬಿಟಿ ಇಲಾಖೆ ರಾಜ್ಯದ ನೋಂದಾಯಿತ ಎಲ್ಲಾ ಸ್ಟಾರ್ಟ್ ಅಪ್ ಸಂಸ್ಥೆಗಳ ಅಹವಾಲು, ಸಮಸ್ಯೆ, ಬೇಡಿಕೆ, ಅಗತ್ಯಗಳನ್ನು ಆಲಿಸಲಿದೆ. ಈ ಸಂಬಂಧ ಐಟಿ ಹಾಗೂ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.
ತಮ್ಮ ಅಗತ್ಯತೆಗಳನ್ನು ತಿಳಿದುಕೊಳ್ಳುವ ಸಲುವಾಗಿ ಐಟಿಬಿಟಿ ಇಲಾಖೆ ಸರ್ವೆಯನ್ನು ಕೈಗೊಳ್ಳುತ್ತಿದೆ. ಸರ್ವೆಯಲ್ಲಿ ಒಟ್ಟು ಗೂಡಿಸಿದ ಅಭಿಪ್ರಾಯಗಳ ಆಧಾರದಲ್ಲಿ ತಮಗೆ ತಕ್ಕಂತೆ ಕಾರ್ಯಕ್ರಮಗಳು, ಕಾರ್ಯಾಗಾರಗಳನ್ನು ರೂಪಿಸಲಿದ್ದೇವೆ. ಆ ಮೂಲಕ ರಾಜ್ಯದ ಸ್ಟಾರ್ಟ್ ಅಪ್ ಸಮುದಾಯಕ್ಕೆ ಪ್ರೋತ್ಸಾಹ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.
ಆಯ್ದ ಕ್ಷೇತ್ರವಾರು ಸ್ಟಾರ್ಟ್ ಅಪ್ಗಳು ಸರ್ಕಾರದ ಮುಕ್ತ ಚರ್ಚಾ ವೇದಿಕೆಯಲ್ಲೂ ಪಾಲ್ಗೊಳ್ಳಬಹುದಾಗಿದೆ ಎಂದು ತಿಳಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, docs.google.com/forms/d/e/1FAI ಸರ್ವೆ ಲಿಂಕ್ನ್ನು ಪೋಸ್ಟ್ ಮಾಡಿದ್ದಾರೆ. ಆಗಸ್ಟ್ 9 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಈ ಸರ್ವೆ ಲಿಂಕ್ನಲ್ಲಿ ಸ್ಟಾರ್ಟ್ ಅಪ್ ಸಂಸ್ಥೆಗಳ ಹೆಸರು, ವಿಳಾಸ, ನೋಂದಣಿ ಸಂಖ್ಯೆ, ಮೊಬೈಲ್ ನಂಬರ್, ಇ-ಮೇಲ್ ಐಡಿಯನ್ನು ನಮೂದಿಸಬೇಕು. ಸರ್ವೆ ಪೇಜ್ನಲ್ಲಿ ಸ್ಟಾರ್ಟ್ ಅಪ್ಗಳು ಯಾವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿವೆ. ಸದ್ಯ ಸಂಸ್ಥೆಯ ಪ್ರಗತಿ ಹಂತ 2022-23 ನಲ್ಲಿ ಆದಾಯ, ಬಂಡವಾಳ ಹೂಡಿಕೆಯಾಗಿದೆಯಾ ಎಂಬ ಬಗ್ಗೆ ಕೆಲ ಅಗತ್ಯ ಮಾಹಿತಿಗಳನ್ನು ಕೇಳಲಾಗಿದೆ.