Breaking News

ಕೋಲಾರದಿಂದ ಜೈಪುರಕ್ಕೆ 21 ಲಕ್ಷ ರೂಪಾಯಿ ಮೌಲ್ಯದ ಟೊಮೆಟೊ ಸಾಗಿಸುತ್ತಿದ್ದ ಟ್ರಕ್ ನಾಪತ್ತೆ

Spread the love

ಕೋಲಾರ : ನಗರದ ಎಪಿಎಂಸಿ ಮಾರುಟ್ಟೆಯಿಂದ ರಾಜಸ್ಥಾನಕ್ಕೆ ಕಳುಹಿಸಿದ್ದ ಟೊಮೆಟೊ ಟ್ರಕ್ ಕಾಣೆಯಾಗಿದೆ.

ಟ್ರಕ್‌ನಲ್ಲಿ ಸುಮಾರು 21 ಲಕ್ಷ ರೂಪಾಯಿ ಮೌಲ್ಯದ ಟೊಮೆಟೊ ಇತ್ತು ಎಂದು ತಿಳಿದುಬಂದಿದೆ.

ಘಟನೆಯ ವಿವರ: ಕೋಲಾರ ಎಪಿಎಂಸಿ ಮಾರುಕಟ್ಟೆಯ ಎಜಿ ಟ್ರೇಡರ್ಸ್​ನ ಸಕ್ಲೇನ್​ ಹಾಗೂ ಎಸ್​.ವಿ.ಟಿ ಟ್ರೇಡರ್ಸ್​ನ ಮುನಿರೆಡ್ಡಿ ಎಂಬವರು ಸುಮಾರು 750 ಕ್ರೇಟ್​ ಟೊಮೆಟೊವನ್ನು ಜುಲೈ 27ರಂದು ಜೈಪುರ್​ಗೆ ಮೆಹತ್​ ಟ್ರಾನ್ಸ್​ಪೋರ್ಟ್​ಗೆ ಸೇರಿದ ಟ್ರಕ್‌ನಲ್ಲಿ ಕಳುಹಿಸಿದ್ದರು. ಭಾನುವಾರ ರಾತ್ರಿ ಜೈಪುರಕ್ಕೆ ಟ್ರಕ್ ತಲುಪಬೇಕಿತ್ತು. ಆದರೆ ಭಾನುವಾರ ರಾತ್ರಿಯಿಂದ ಟ್ರಕ್ ಹಾಗೂ ಚಾಲಕ ಇಬ್ಬರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಮೆಹತ್​ ಟ್ರಾನ್ಸ್​ಪೋರ್ಟ್​ ಮಾಲೀಕ ಸಾದಿಕ್​ ಅವರಿಗೂ ಟ್ರಕ್ ಸಂಪರ್ಕಕ್ಕೆ ಸಿಕ್ಕಿಲ್ಲ. ಎಪಿಎಂಸಿ ಮಾರುಕಟ್ಟೆಯ ವರ್ತಕರು ಕೋಲಾರ ನಗರ ಪೊಲೀಸ್​ ಠಾಣೆಗೆ ಈ ಕುರಿತು ದೂರು ನೀಡಿದ್ದಾರೆ.

ಕೋಲಾರ ಎಪಿಎಂಸಿ ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಇಲ್ಲಿಂದ ದೇಶದ ಹಲವು ರಾಜ್ಯಗಳಿಗೆ ಟೊಮೆಟೊ ರವಾನೆಯಾಗುತ್ತದೆ. ಈಗಂತೂ ಟೊಮೆಟೊ ಬೆಲೆ ಗಗನಕ್ಕೇರಿರುವುದರಿಂದ ಕೋಲಾರದ ಎಪಿಎಂಸಿ ಮಾರುಕಟ್ಟೆ ಸುತ್ತಮುತ್ತ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಮಂಡಿ ಮಾಲೀಕರು ಖಾಸಗಿ ಭದ್ರತೆಯ ಜೊತೆಗೆ ಸಿಸಿಟಿವಿ ಕ್ಯಾಮರಾಗಳನ್ನೂ ಅಳವಡಿಸಿದ್ದಾರೆ.

ಟ್ರಕ್ ಸಂಖ್ಯೆ RJ-04-GC-3756 ಮೂಲಕ ಜೈಪುರಕ್ಕೆ ಟೊಮೆಟೊ ಸಾಗಿಸಲಾಗಿದೆ. ಭಾನುವಾರ ರಾತ್ರಿ ಜೈಪುರ್​ಗೆ ತಲುಪಬೇಕಿತ್ತು. ಆದರೆ ನಿನ್ನೆ ಮಧ್ಯಾಹ್ನದವರೆಗೂ ಸಂಪರ್ಕದಲ್ಲಿದ್ದ ಚಾಲಕ​ ಅನ್ವರ್​ ರಾತ್ರಿಯಿಂದ ಸಂಪರ್ಕಕ್ಕೆ ಸಿಕ್ಕಿಲ್ಲ. ವಾಹನ ಅಪಘಾತವಾಗಿದ್ದರೆ ಅಥವಾ ಬೇರೆ ಏನಾದ್ರೂ ಸಮಸ್ಯೆ ಆಗಿದ್ದರೆ ನಮಗೆ ಮಾಹಿತಿ ಬರುತ್ತಿತ್ತು ಎಂದು ವರ್ತಕರು ಹೇಳಿದ್ದಾರೆ. ಕಳೆದ ಎರಡು ದಿನಗಳ ಹಿಂದಷ್ಟೇ ಕೋಲಾರದ ಎಪಿಎಂಸಿ ಮಾರುಕಟ್ಟೆಯಿಂದ ಕಳ್ಳನೊಬ್ಬ ಟೊಮೆಟೊ ತುಂಬಿದ್ದ ಬಾಕ್ಸ್​ ಕಳ್ಳತನ ಮಾಡಿದ್ದ.

ಟೊಮೆಟೊ ತುಂಬಿದ್ದ ಗೂಡ್ಸ್​ ವಾಹನ ಅಪಹರಿಸಿದ ದಂಪತಿ : ಟೊಮೆಟೊ ತುಂಬಿದ್ದ ಗೂಡ್ಸ್ ವಾಹನವನ್ನು ಕಳ್ಳತನ ಮಾಡಿದ್ದ ಘಟನೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿತ್ತು. ಆರೋಪಿ ದಂಪತಿಯನ್ನು ಆರ್​ಎಂಸಿ ಯಾರ್ಡ್ ಠಾಣಾ ಪೊಲೀಸರು ಬಂಧಿಸಿದ್ದರು. ಬಂಧಿತರನ್ನು ಭಾಸ್ಕರ್ ಹಾಗೂ ಆತನ ಪತ್ನಿ ಸಿಂಧುಜಾ ಎಂದು ಗುರುತಿಸಲಾಗಿತ್ತು.

ಜುಲೈ 8ರಂದು ಹಿರಿಯೂರಿನ ರೈತರೋರ್ವರು ತಮ್ಮ ಜಮೀನಿನಲ್ಲಿ ಬೆಳೆದಿದ್ದ 250ಕ್ಕೂ ಹೆಚ್ಚು ಕೆಜಿಯಷ್ಟು ಟೊಮೆಟೊವನ್ನು ಕೋಲಾರಕ್ಕೆ ಕೊಂಡೊಯ್ಯುತ್ತಿದ್ದರು. ಆರ್​ಎಂಸಿ ಯಾರ್ಡ್ ಬಳಿ ಕಾರಿನಲ್ಲಿ ಬಂದಿದ್ದ ಆರೋಪಿಗಳು ತಮ್ಮ ಕಾರಿಗೆ ನಿಮ್ಮ ವಾಹನ ಡಿಕ್ಕಿಯಾಗಿದೆ ಎಂದು ಬಲವಂತವಾಗಿ ಗೂಡ್ಸ್ ವಾಹನ ನಿಲ್ಲಿಸಿಚಾಲಕ ಹಾಗೂ ರೈತನ ಮೇಲೆ ಹಲ್ಲೆ ನಡೆಸಿದ್ದರು.


Spread the love

About Laxminews 24x7

Check Also

ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾಪಂ ಗಳ ಸೇರ್ಪಡೆ ವಿವಾದ – ನಿರ್ಧಾರ ಕೈಬಿಡುವಂತೆ ಸಿಎಂಗೆ ಹೆಚ್‌ಡಿಕೆ ಪತ್ರ

Spread the loveಮಂಡ್ಯ: ಜಿಲ್ಲೆಯ ಮದ್ದೂರು  ತಾಲ್ಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳನ್ನ ಸ್ಥಳೀಯರ ಆಶಯಗಳಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ