ದಾವಣಗೆರೆ: ಹಾಡಹಗಲೇ ಉಪನ್ಯಾಸಕರೊಬ್ಬರ ಮನೆಗೆ ಖದೀಮರು ಕನ್ನ ಹಾಕಿ, ಚಿನ್ನಾಭರಣ ಮತ್ತು ನಗದು ಸೇರಿ 33.66 ಲಕ್ಷ ರೂ ಎಗರಿಸಿ ಎಸ್ಕೇಪ್ ಆಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದ ಅಣ್ಣಮ್ಮ ಪ್ರೌಢಶಾಲೆಯ ಬಳಿಯ ಮನೆಯೊಂದರಲ್ಲಿ ನಡೆದಿದೆ. ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಸಿದ್ದೇಶ್ವರಪ್ಪ ಎಂಬವರಿಗೆ ಸೇರಿದ ಮನೆಯಲ್ಲಿ ಕಳ್ಳತನ ಆಗಿದೆ.
ಮನೆ ಮಾಲೀಕರಾದ ಸಿದ್ದೇಶ್ವರಪ್ಪ ಅವರ ಪತ್ನಿಯು ಪ್ರೌಢ ಶಾಲೆಯಲ್ಲಿ ಸರ್ಕಾರಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುವಾರ ಮಧ್ಯಾಹ್ನದ ವೇಳೆ ತಮ್ಮ ಮನೆಗೆ ಬೀಗ ಹಾಕಿ ತಮ್ಮ ಪುತ್ರಿಯನ್ನು ದಾವಣಗೆರೆ ನಗರದ ಖಾಸಗಿ ಕಾಲೇಜಿಗೆ ಬಿಡಲು ತೆರಳಿದಾಗ ಘಟನೆ ನಡೆದಿದೆ. ಕಬ್ಬಿಣದ ಸರಳುಗಳನ್ನು ಕತ್ತರಿಸಿರುವ ಕಳ್ಳರು ಕಿಟಕಿಯ ಮೂಲಕ ಮನೆಯ ಬಾಗಿಲು ಮುರಿದು ಕೃತ್ಯ ಎಸಗಿದ್ದಾರೆ. ಹಗಲು ಹೊತ್ತಿನಲ್ಲೇ ಮನೆಗೆ ನುಗ್ಗಿದ ಕಳ್ಳರು ಬೀರುವಿನ ಬೀಗ ಒಡೆದು ಅದರಲ್ಲಿದ್ದ 15 ಲಕ್ಷ ರೂ ಮೌಲ್ಯದ ಚಿನ್ನಾಭರಣ, 17.80 ಲಕ್ಷ ರೂ ಮೌಲ್ಯದ ಬೆಳ್ಳಿ ಸೇರಿದಂತೆ 1.50 ಲಕ್ಷ ನಗದು ಹಣ ದೋಚಿ ಕಾಲ್ಕಿತ್ತಿದ್ದಾರೆ. ಉಪನ್ಯಾಸಕ ಸಿದ್ದೇಶ್ವರಪ್ಪ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಘಟನೆ ತಿಳಿದ ಡಿವೈಎಸ್ಪಿ ಸಂತೋಷ್ ಘಟನಾ ಸ್ಥಳಕ್ಕೆ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಲಬುರಗಿಯಲ್ಲಿ ₹20 ಲಕ್ಷ ವಂಚನೆ: ಪ್ಲ್ಯಾಟ್ ಬಾಡಿಗೆಗೆ ಕೊಡುವುದಿದೆ ಎಂದು ಒಎಲ್ಎಕ್ಸ್ನಲ್ಲಿ ಜಾಹೀರಾತು ಹಾಕಿದ್ದ ವ್ಯಕ್ತಿಯೊಬ್ಬರಿಗೆ ಇಂಡಿಯನ್ ಆರ್ಮಿ ಆಫೀಸರ್ ಎಂದು ಸುಳ್ಳು ಹೇಳಿಕೊಂಡು ಕರೆ ಮಾಡಿದ ವಂಚಕರು ಪ್ಲ್ಯಾಟ್ ಮಾಲೀಕರಿಗೆ 20 ಲಕ್ಷ ರೂ.ಗಳಿಗೂ ಅಧಿಕ ಹಣ ಪಂಗನಾಮ ಹಾಕಿರುವ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ. ಇಲ್ಲಿನ ಐವಾನ್ ಶಾಹಿ ಪ್ರದೇಶದ ನಿವಾಸಿ ಅಬ್ದುಲ್ ಖದೀರ್ ಹಣ ಕಳೆದುಕೊಂಡವರು.