ಬಿಹಾರದ ಸಮಸ್ತಿಪುರ ಜಿಲ್ಲೆಯಿಂದ ಆಘಾತಕಾರಿ ಸುದ್ದಿಯೊಂದು ಹೊರಬಂದಿದೆ.
ಕುಡಿದ ಅಮಲಿನಲ್ಲಿ ತಂದೆಯೊಬ್ಬ ತನ್ನ ಅಮಾಯಕ ಮಗನನ್ನೇ ಕತ್ತು ಸೀಳಿ ಕೊಂದಿದ್ದಾನೆ. ಕೃತ್ಯ ಎಸಗಿದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಮೊಹಿಯುದ್ದೀನ್ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಭಾದಯ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮಗನನ್ನು ಕೊಂದ ತಂದೆ : ಘಟನೆಗೆ ಸಂಬಂಧಿಸಿದಂತೆ ಭದಯ್ಯ ಗ್ರಾಮದಲ್ಲಿ ತಂದೆ ತನ್ನ ಮೂರು ವರ್ಷದ ಅಮಾಯಕ ಮಗನ ಕುತ್ತಿಗೆಗೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ. ಇದರಿಂದ ಮಗು ಗಂಭೀರವಾಗಿ ಗಾಯಗೊಂಡಿದೆ. ಗಲಾಟೆ ನಡೆದ ನಂತರ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಆಗಮಿಸಿ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ದುರಾದೃಷ್ಠವಶಾತ್ ಚಿಕಿತ್ಸೆ ವೇಳೆ ಮಗು ಸಾವನ್ನಪ್ಪಿದೆ ಎಂಬುದು ತಿಳಿದು ಬಂದಿದೆ.ಪತ್ನಿಯೊಂದಿಗೆ ಜಗಳವಾಡಿ ಕೊಲೆ : ಮಂಗಳವಾರ ಸಂಜೆ ಕುಡಿದ ಮತ್ತಿನಲ್ಲಿ ಮನೆಗೆ ಬಂದ ತಂದೆ ಕುಂದನ್ ಸಾಹ್ನಿ ತನ್ನ ಪತ್ನಿಯೊಂದಿಗೆ 100 ರೂ ಕೊಡುವಂತೆ ಕೇಳಿದ್ದಾನೆ. ಈ ವೇಳೆ ಅವರಿಬ್ಬರ ನಡುವೆ ಜಗಳ ಶುರುವಾಗಿದೆ. ಅಷ್ಟರಲ್ಲಿ ಕುಂದನ್ ತನ್ನ ಹೆಂಡತಿಯನ್ನು ಕಠಾರಿಯಿಂದ ಕೊಚ್ಚಿ ಕೊಲೆ ಮಾಡಲು ಮುಂದಾಗಿದ್ದಾನೆ. ಇದರಿಂದ ಹೆದರಿದ ಪತ್ನಿ ಓಡಿ ಹೋಗಿದ್ದಾಳೆ. ಬಳಿಕ ಕುಂದನ್ ತನ್ನ ಪಕ್ಕದಲ್ಲಿ ಮಲಗಿದ್ದ ಅಮಾಯಕ ಮಗನ ಕುತ್ತಿಗೆಗೆ ಹಲ್ಲೆ ನಡೆಸಿದ್ದಾನೆ. ಬಳಿಕ ಮನೆಯಿಂದ ಓಡಿ ಹೋಗಿದ್ದಾನೆ.