ವಿಜಯನಗರ : ಶೆರ್ಪಾ ಸಭೆಯ ನಂತರ ಶುಕ್ರವಾರ ಸಂಜೆ ಜಿ-20 ಪ್ರತಿನಿಧಿಗಳು ವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳನ್ನು ವೀಕ್ಷಣೆ ಮಾಡಿದರು. ಪ್ರವಾಸೋದ್ಯಮ ಇಲಾಖೆ, ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆಯಿಂದ ಸ್ಮಾರಕ ವೀಕ್ಷಣೆ ವ್ಯವಸ್ಥೆಯನ್ನು ಕಲ್ಪಿಸಲಾಯಿತು.
ಹಂಪಿಯ ಮಹಾನವಮಿ ದಿಬ್ಬ, ಹಜಾರರಾಮ, ಕಮಲ ಮಹಲ್ ಹಾಗೂ ಗಜಶಾಲೆ, ರಾಣಿ ಅರಮನೆ ಅಧಿಷ್ಠಾನ ಹಾಗೂ ವಿವಿಧ ಸ್ಮಾರಕಗಳ ಕುರಿತು ಪ್ರವಾಸಿ ಮಾರ್ಗದರ್ಶಿಗಳು ಗೌರವಪೂರಕವಾಗಿ ಸ್ವಾಗತಿಸುತ್ತಾ ಮಾಹಿತಿ ನೀಡಿದರು.
ಮಹಾನವಮಿ ದಿಬ್ಬದ ಮೇಲೆ ಹತ್ತಿ ಸುತ್ತಲಿನ ಹಂಪಿ ಪರಿಸರವನ್ನು ಕಣ್ತುಂಬಿಕೊಂಡ ಜಿ-20 ಪ್ರತಿನಿಧಿಗಳು ನಂತರ ದಿಬ್ಬದ ಸುತ್ತಲೂ ಕೆತ್ತಿರುವ ಆಕರ್ಷಕ ಉಬ್ಬು ಶಿಲೆಗಳನ್ನು ಕಂಡು ಬೆರಗಾದರು. ಮಹಾನವಮಿ ದಿಬ್ಬದ ಸಮೀಪದಲ್ಲಿರುವ ಪುಷ್ಕರಣಿಯನ್ನು ಕಂಡು ಆಗಿನ ಕಾಲದ ನೀರು ಸರಬರಾಜು ವ್ಯವಸ್ಥೆಯ ಮಾಹಿತಿ ತಿಳಿದುಕೊಂಡರು. ನಂತರ ರಾಜ ಸಭಾಂಗಣ, ನೆಲಸ್ತರದ ಕೋಣೆ, ಹಜಾರ ರಾಮಚಂದ್ರ ದೇವಾಲಯ ವೀಕ್ಷಿಸಿದರು. ಪ್ರತಿ ಸ್ಮಾರಕಗಳ ಬಳಿ ಇಲಾಖೆಯಿಂದ ನಿಯೋಜಿಸಿದ ಪ್ರವಾಸಿ ಮಾರ್ಗದರ್ಶಿಗಳು ಮಾಹಿತಿ ನೀಡಿದರು.
ಭಾರತೀಯ ಶೆರ್ಪಾ ಸಭೆಯ ಅಮಿತಾಬ್ ಕಾಂತ್ ಸೇರಿದಂತೆ ಅತ್ಯುನ್ನತ ಅಧಿಕಾರಿಗಳು ಮಳೆ ನಂತರವು ಸಹ ಉತ್ಸಾಹದಿಂದ ಸ್ಮಾರಕಗಳ ವೀಕ್ಷಣೆ ಜೊತೆಗೆ ತಮ್ಮ ಮೊಬೈಲ್ನಲ್ಲಿ ಫೋಟೋ ತೆಗೆದುಕೊಂಡರು. ಪೊಲೀಸ್ ಸಿಬ್ಬಂದಿಗಳು ಜಿ-20 ಪ್ರತಿನಿಧಿಗಳು ಸ್ಮಾರಕಗಳ ವೀಕ್ಷಣೆಗೆ ತೆರಳುವ ಮಾರ್ಗಗಳಲ್ಲಿ ಸಂಚಾರ ಮುಕ್ತ ವ್ಯವಸ್ಥೆಯನ್ನು ಕೈಗೊಂಡು ತೆರಳಲು ಅನುವು ಮಾಡಿಕೊಟ್ಟರು.