ಬೆಂಗಳೂರು: ತೀರ್ಥಹಳ್ಳಿಯಲ್ಲಿ 70 ಕಾಮಗಾರಿ ಆಗಿದ್ದು, ಹೆಚ್ಚಿನವು ಪ್ರಗತಿಯಲ್ಲಿವೆ.
ಆದಷ್ಟು ಬೇಗ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಭೋಸರಾಜ್ ತಿಳಿಸಿದರು. ಆರಗ ಜ್ಞಾನೇಂದ್ರ ಸಣ್ಣ ನೀರಾವರಿ ಸಚಿವರಿಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಸದ್ಯ 26 ಕಾಮಗಾರಿಗಳು ನಡೆಯುತ್ತಿವೆ. ಅದನ್ನು ಆದಷ್ಟು ಬೇಗ ಪೂರ್ಣಗೊಳಿಸುತ್ತೇವೆ. ಗುತ್ತಿಗೆದಾರರಿಗೆ ಸಮರ್ಪಕವಾಗಿ ಆದ್ಯತೆ ಮೇರೆಗೆ ಹಣ ಸಂದಾಯ ಮಾಡುತ್ತಿದ್ದೇವೆ. ಹಣಕಾಸು ವ್ಯವಸ್ಥೆ ಆಗುತ್ತಿದ್ದಂತೆ ಸಂದಾಯ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಕೆಲಸ ವಿಳಂಬ ಆಗುವುದಿಲ್ಲ. ಬಾಕಿ ಇರುವ ಕೆಲಸ ಬೇಗ ಮುಗಿಯಲಿದೆ ಎಂದರು.
ಸದ್ಯ ನಾವು ಪ್ರಗತಿಯಲ್ಲಿರುವ ಕೆಲಸ ಮಾಡುತ್ತೇವೆ. ಎರಡನೇ ಹಂತದಲ್ಲಿ ಟೆಂಡರ್ ಹಂತದ ಕೆಲಸ ಆಗಲಿದೆ. 2,500 ಕೋಟಿ ರೂ. ಇಲಾಖೆಯಲ್ಲಿ ಮೀಸಲಿದೆ ಅದನ್ನು ಬಳಸಿಕೊಳ್ಳುತ್ತೇವೆ ಎಂದು ಭರವಸೆ ಕೊಟ್ಟರು. ಆರಗ ಜ್ಞಾನೇಂದ್ರ ಮಾತನಾಡಿ, ನಾವು ಅಣೆಕಟ್ಟು ನಿರ್ಮಾಣದಿಂದ ನಿರಾಶ್ರಿತರಾದವರು. ಸಣ್ಣ ನೀರಾವರಿ ಯೋಜನೆ ಮಾತ್ರ ಅವಲಂಬಿಸಿದ್ದೇವೆ. 10-20 ಲಕ್ಷದಲ್ಲೇ ನಮ್ಮ ಕೆಲಸ ಆಗಿ ಹೋಗುತ್ತದೆ. ಕೋಟಿಗಳ ಲೆಕ್ಕದಲ್ಲಿ ನಾವು ಯೋಜನೆ ಕೇಳುತ್ತಿಲ್ಲ. ಇಷ್ಟು ಚಿಕ್ಕ ಕೆಲಸ ಮಾಡದಿದ್ದರೆ ಎಂಜಿನಿಯರ್ಗಳನ್ನು ತೆಗೆದುಹಾಕಿ. ಒಂದು ಸಣ್ಣ ಯೋಜನೆ ಐದಾರು ವರ್ಷ ತೆಗೆದುಕೊಳ್ಳುತ್ತದೆ. ಏತ ನೀರಾವರಿ ಯೋಜನೆ ಹತ್ತಿಪ್ಪತ್ತು ಅನುಮೋದಿಸಿದ್ದೇನೆ. ಆದರೆ ಒಂದೂ ಜಾರಿಗೆ ಬಂದಿಲ್ಲ. ಎಂಜಿನಿಯರ್ಗಳು ಫೇಕ್ಗಳಾ? ಪ್ರಾಮಾಣಿಕ ಕೆಲಸ ಮಾಡಿದವರಿಗೆ ಟೆಂಡರ್ ಪಾಸ್ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.
ಜೈನ ಮಂದಿರಗಳ ಅಭಿವೃದ್ಧಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಹಿಂದೆ ನಮ್ಮ ಸರ್ಕಾರ ಇದ್ದಾಗಲೇ ಜೈನ ಮಂದಿರಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿದ್ದೆವು. ಅದರ ಬಳಕೆ ಆಗಿಲ್ಲ. ಇಲ್ಲಿನ ಕಡಲತೀರಗಳ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೇವೆ. ಈಗಲೂ ನಾವು ಇಲ್ಲಿನ ಅಭಿವೃದ್ಧಿಗೆ ಬದ್ಧವಾಗಿದ್ದು, ಹಿಂದೆ ನಾನು ಪ್ರವಾಸೋದ್ಯಮ ಸಚಿವನಾಗಿದ್ದಾಗ ಸಾಕಷ್ಟು ಅಭಿವೃದ್ಧಿ ಮಾಡಿದ್ದೆ. ಈಗಿನ ಪ್ರವಾಸೋದ್ಯಮ ಸಚಿವರಿಗೆ ಈ ವಿಚಾರವಾಗಿ ಗಮನ ತಂದು, ಅಲ್ಲಿನ ಅಭಿವೃದ್ಧಿಗೆ ಸೂಚಿಸುತ್ತೇನೆ. ಈ ಭಾಗದ ಪ್ರವಾಸೋದ್ಯಮ ಪ್ರಗತಿಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದರು.