ಬೆಳಗಾವಿ: ಮಂತ್ರಿಯಾದ ನಂತರ ಇಡೀ ರಾಜ್ಯ ಮತ್ತು ಜಿಲ್ಲೆಯಿಂದ ಜನ ಭೇಟಿಯಾಗಲು ಬರುತ್ತಿದ್ದಾರೆ. ಆದರೆ ನನ್ನ ಕ್ಷೇತ್ರದ ಜನರ ಕಷ್ಟ ಸುಖ ಹಂಚಿಕೊಳ್ಳಲು ಅವರಿಗೆ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ. ಇದು ನನಗೆ ನಿಜವಾಗಲೂ ದೊಡ್ಡ ತಲೆನೋವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೇಸರ ಹೊರಹಾಕಿದ್ದಾರೆ.
ಭಾನುವಾರ ನಗರದ ಲಕ್ಷ್ಮೀ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖಾ ಮಠದಲ್ಲಿ ನಡೆದ 68ನೇ ಮಾಸಿಕ ಸುವಿಚಾರ ಚಿಂತನೆ ಅಂಗವಾಗಿ ಗುರು ಪೂರ್ಣಿಮೆ ಹಾಗೂ ದಿವ್ಯ ಸತ್ಸಂಗ ಕಾರ್ಯಕ್ರಮದಲ್ಲಿ ಹುಕ್ಕೇರಿ ಹಿರೇಮಠ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಗ್ರಾಮೀಣ ಕ್ಷೇತ್ರದ ಜನರನ್ನು ನನ್ನ ಸ್ವಂತ ಅಣ್ಣ ತಮ್ಮಂದಿರಂತೆ ಮತ್ತು ನಾನು ಅವರ ಮನೆ ಮಗಳ ರೀತಿ ಹಚ್ಚಿಕೊಂಡಿದ್ದೇನೆ. ಹಿಂದಿನ ಐದು ವರ್ಷ ಶಾಸಕಿಯಾಗಿದ್ದಾಗ ಒಳ್ಳೆಯ ರೀತಿ ಕ್ಷೇತ್ರದ ಜನತೆಗೆ ಸಮಯ ಕೊಟ್ಟಿದ್ದೆ. ಆ ರೀತಿಯ ಸಂಬಂಧ ಇರೋದರಿಂದಲೇ ಎಂತೆಂತಹ ಘಟಾನುಘಟಿ ನಾಯಕರು ಬಂದರೂ, ಒಮ್ಮೆ ಅಲ್ಲ ಎರಡು ಬಾರಿ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಹೀಗಾಗಿ ಮೊದಲು ಇವರನ್ನು ನಾನು ಸಮಾಧಾನ ಪಡಿಸಬೇಕಿದೆ ಎಂದರು.
ಮನೆ ಗೆದ್ದು ಮಾರು ಗೆಲ್ಲು ಎಂದು ಹಿರಿಯರು ಹೇಳುತ್ತಾರೆ. ಆದ್ದರಿಂದ ಮೊದಲು ಮನೆ ಸಮಾಧಾನ ಮಾಡಿ, ಆಮೇಲೆ ಇಡೀ ರಾಜ್ಯ ಗೆಲ್ಲಲು, ರಾಜ್ಯದ ಜನರ ಮನಸು ಗಳಿಸಲು ಒಂದು ದೊಡ್ಡ ಅವಕಾಶ ಸಿಕ್ಕಂತೆ ಆಗುತ್ತದೆ. ಆದರೂ ಎಲ್ಲಾ ಬ್ಯಾಲನ್ಸ್ ಮಾಡುತ್ತಿದ್ದೇನೆ. ಗುರು ಹಿರಿಯರ ಆಶೀರ್ವಾದದಿಂದ ಒಳ್ಳೆಯ ಕೆಲಸ ಮಾಡುತ್ತಿದ್ದೇನೆ ಎಂದು ಸಚಿವರು ಹೇಳಿದರು.
ಇನ್ನು ಮಠ ಮಾನ್ಯಗಳನ್ನು ಬೆಳೆಸುವಂಥ ಸಂಸ್ಕೃತಿ ನಮ್ಮ ದೇಶದ್ದು. ಮಠಗಳನ್ನು ಬೆಳೆಸಿದರೆ ನಾವು ಉಳಿಯುತ್ತೇವೆ ಎನ್ನುವ ಸತ್ಯಾಂಶ ನನಗೆ ಗೊತ್ತಿದೆ. ನಾಡಿನಲ್ಲಿ ಮಠಗಳು ಇದ್ದರೇ ಸಮಾಜ ಸದೃಢವಾಗುತ್ತದೆ. ಮಠಗಳನ್ನು ಬೆಳೆಸಲು ಕೋಟ್ಯಂತರ ರೂ. ಮೀಸಲಿಟ್ಟಿದ್ದೇವೆ. ನಾನು ಹುಕ್ಕೇರಿ ಹಿರೇಮಠ ಹಾಗೂ ಬೇರೆ ಮಠಗಳ ಜೀರ್ಣೋದ್ಧಾರಕ್ಕೆ ಟೊಂಕ ಕಟ್ಟಿ ನಿಲ್ಲುತ್ತೇನೆ. ವಿಶೇಷವಾಗಿ ಹುಕ್ಕೇರಿ ಹಿರೇಮಮಠದ ಶಾಖಾ ಮಠದ ಕಟ್ಟಡ ಕಟ್ಟುವಲ್ಲಿ ಯಶಸ್ವಿಯಾಗುತ್ತೇನೆ. ಆದಷ್ಟು ಬೇಗ ಎಲ್ಲರೂ ಸೇರಿಕೊಂಡು ಈ ಮಠವನ್ನು ಪೂರ್ಣಗೊಳಿಸುತ್ತೇವೆ ಎಂದು ಭರವಸೆ ನೀಡಿದರು.