ಗಂಗಾವತಿ (ಕೊಪ್ಪಳ) : ಬಸ್ಸಿನಲ್ಲಿ ಹೆಣ್ಮಕ್ಕಳು ಫ್ರಿಯಾಗಿ ಓಡಾಡಾಕ ಶುರುವಾದಾಗಿನಿಂದ ಒಂದೂ ಬಸ್ ಖಾಲಿ ಇರವಲ್ವು.
ಮನಿ ಬಿಟ್ಟು ಬಂದು ಗುಡಿಗೆ ಹೋಗಣಾಂದ್ರ ಹೈರಾಣ ಆಗಿವಿ. ಈ ಫ್ರೀ ಬಸ್ ಬಿಟ್ಟು ಸರ್ಕಾರದೋರು ಜನರಿಗೆ ಬೇಕಾದ ಅಕ್ಕಿ, ಸಿಲಿಂಡರ್, ಮನೆ ಕೊಡ್ಲಿ’.. ಹೀಗೆಂದು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಿಳೆಯರ ಉಚಿತ ಸಾರಿಗೆ ಪ್ರಯಾಣಕ್ಕೆ ಅವಕಾಶ ಇರುವ ಶಕ್ತಿ ಯೋಜನೆಯ ಬಗ್ಗೆ ಕೆಲ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶನಿವಾರ ಆಗಿದ್ದರಿಂದ ಗಂಗಾವತಿ ತಾಲೂಕಿನ ಹಲವು ಗ್ರಾಮಗಳಿಂದ ಇಲ್ಲಿನ ಆನೆಗೊಂದಿ ಸಮೀಪದ ಅಂಜನಾದ್ರಿಗೆ ತೆರಳಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಸ್ ನಿಲ್ದಾಣಕ್ಕೆ ಬಂದಿದ್ದರು. ಬಸ್ ನಿಲ್ದಾಣದಲ್ಲಿ ಕೆಲವು ಗಂಟೆಗಳ ಕಾಲ ಕಾದರೂ ವಾಹನ ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಮಕ್ಕಳೊಂದಿಗೆ ದೇವಾಲಯಕ್ಕೆ ತೆರಳಲು ಆಗಮಿಸಿದ್ದ ಕೆಲ ಮಹಿಳೆಯರು ತೀವ್ರ ಅಸಮಾಧಾನ ಹೊರಹಾಕಿದ್ರು
ಉಚಿತ ಸಾರಿಗೆ ಸೌಲಭ್ಯ ಬೇಡ: ರಾಜ್ಯ ಸರ್ಕಾರ ಮಹಿಳೆಯರಿಗೆ ಕಲ್ಪಿಸಿರುವ ಉಚಿತ ಸಾರಿಗೆ ಯೋಜನೆಯನ್ನು ಸ್ಥಗಿತಗೊಳಿಸಬೇಕು. ಇದರ ಬದಲು ಬಡವರಿಗೆ ಉಪಯುಕ್ತವಾಗುವ ಅಕ್ಕಿ, ಮನೆ ಇಲ್ಲದವರಿಗೆ ನಿವೇಶನ, ಮನೆ ನಿರ್ಮಾಣ, ಅಡುಗೆ ಸಿಲಿಂಡರ್ ಮುಂತಾದವುಗಳನ್ನು ಕೊಡಲಿ ಎಂದು ಬಸಾಪಟ್ಟಣದ ದುರ್ಗಮ್ಮ ಎಂಬವರು ಒತ್ತಾಯಿಸಿದ್ದಾರೆ.
ಪ್ರಯಾಣಿಸಲು ಬಸ್ ಸಿಕ್ತಾ ಇಲ್ಲ. ಸಿಕ್ಕರೂ ಅಲ್ಲಿ ಸ್ಥಳವಕಾಶ ಇಲ್ಲ. ತುಂಬಿದ ಬಸ್ಗಳನ್ನು ಚಾಲಕರು ಜನ ಹತ್ತುತ್ತಿರುವಾಗಲೇ ಚಲಾಯಿಸಿಕೊಂಡು ಹೋಗುತ್ತಿದ್ದಾರೆ. ಈ ವೇಳೆ ಮಕ್ಕಳು, ಮಹಿಳೆಯರು ವಾಹನದಿಂದ ಬಿದ್ದು ಏನಾದರೂ ಆದರೆ ಅದಕ್ಕೆ ಯಾರು ಜವಾಬ್ದಾರರು ಎಂದು ಪ್ರಶ್ನಿಸಿದರು.