ಕಲಬುರಗಿ : ಮಳೆಗಾಲ ಆರಂಭವಾಗಿ ತಿಂಗಳಾಗುತ್ತಿದ್ದರು ಸಹ ತೊಗರಿನಾಡು ಕಲಬುರಗಿ ಜಿಲ್ಲೆಯಲ್ಲಿ ವರುಣ ಕೃಪೆ ತೋರಿಲ್ಲ. ಮಳೆ ಬಾರದೆ ರೈತರು ಕೃಷಿ ಮಾಡಲಾಗದೆ ಸಂಕಷ್ಟಕ್ಕೆ ಸಿಲುಗಿದ್ದಾರೆ.
ಆಕಾಶದತ್ತ ಮುಖ ಮಾಡಿರೋ ರೈತಾಪಿ ವರ್ಗ ಸಾಂಪ್ರದಾಯಿಕ ಆಚರಣೆಗೆ ಮುಂದಾಗಿದ್ದು, ಮಳೆಗಾಗಿ ಜಿಲ್ಲೆಯಲ್ಲಿ ರೈತರು ಕಪ್ಪೆಗಳ ಮದುವೆಯನ್ನು ಶಾಸ್ತ್ರೋಕ್ತವಾಗಿ ಮಾಡಿ ದೇವರಲ್ಲಿ ಮೊರೆ ಇಟ್ಟಿದ್ದಾರೆ.
ಕಲಬುರಗಿ ತಾಲ್ಲೂಕಿನ ಜಂಬಗಾ ಬಿ ಗ್ರಾಮಸ್ಥರು ಮಳೆಗಾಗಿ ಕಪ್ಪೆಗಳ ಮದುವೆ ನೆರವೇರಿಸಿ ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಗಂಡು ಮತ್ತು ಹೆಣ್ಣು ಕಪ್ಪೆಗಳ ಸಂಬಂಧಿಕರು ಹಾಗೂ ಗ್ರಾಮಸ್ಥರೆಲ್ಲರೂ ಸೇರಿಕೊಂಡು ಕಪ್ಪೆಗಳಿಗೆ ಸ್ನಾನ ಮಾಡಿಸಿ, ಹೂಗಳಿಂದ ಸಿಂಗರಿಸಿ ಮನುಷ್ಯರ ಮದುವೆ ಮಾಡುವ ಹಾಗೆ ಕಪ್ಪೆಗಳ ಮದುವೆ ಮಾಡಿದ್ದಾರೆ. ಗ್ರಾಮದ ಮಹಿಳೆಯರು ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಗಂಡು- ಹೆಣ್ಣು ಕಪ್ಪೆಗಳಿಗೆ ಶಾಸ್ತ್ರೋಕ್ತವಾಗಿ ದೇವಸ್ಥಾನದಲ್ಲಿ ಮದುವೆ ಮಾಡಿ, ಹಾಡು ಹಾಡಿ ಮಳೆಗಾಗಿ ಪ್ರಾರ್ಥಿಸಿದ್ದಾರೆ.
ಮದುವೆ ಬಳಿಕ ಗಂಡು ಮತ್ತು ಹೆಣ್ಣು ಕಪ್ಪೆಗಳ ಬೀಗರಿಗೆ ಸೀರೆ, ಬಟ್ಟೆ ಉಡುಗೊರೆ ನೀಡಿದ್ದಾರೆ. ಅಲ್ಲದೆ ಕಪ್ಪೆಗಳ ಮದುವೆಗಾಗಿಯೇ ಕಡಬು, ಬಜ್ಹಿ ಮಾಡಲಾಗಿದ್ದು, ಗ್ರಾಮಸ್ಥರೆಲ್ಲ ಕಪ್ಪೆಗಳ ಮದುವೆ ಬಳಿಕ ಮದುವೆ ಊಟ ಸವಿದಿದ್ದಾರೆ. ಜಂಬಗಾ ಬಿ ಗ್ರಾಮಸ್ಥರು ಮನುಷ್ಯರ ಮದುವೆ ಮಾಡುವ ರೀತಿಯಲ್ಲಿಯೇ ಕಪ್ಪೆಗಳ ಮದುವೆ ಮಾಡಿ ಹುಯ್ಯೋ ಹುಯ್ಯೋ ಮಳೆರಾಯ ಅಂತಾ ವರುಣ ದೇವನಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡಿದ್ದಾರೆ.