ವಿಧಿಯಾಟ ಬಲ್ಲವರಾರು… ಈ ವರದಿ ನೋಡಿದ್ರೆ ಹೇ ವಿಧಿಯೇ ನಿನೇಷ್ಟೂ ಕ್ರೂರಿ ಅನ್ನಿಸದಿರದು. ರಸ್ತೆ ಅಪಘಾತವೊಂದು ನವ ವಿವಾಹಿತರನ್ನು ಬಲಿ ತೆಗೆದು ಕೊಂಡಿದೆ. ಮದುವೆಯಾಗಿ ಒಂದು ತಿಂಗಳಾಗುವ ಮುನ್ನ ಇಬ್ಬರೂ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ವಿಜಯಪುರ ನಗರದ ಹೊರವಲಯದ ಸೋಲಾಪುರ ಬೈಪಾಸ್ ಬಳಿ ತಡರಾತ್ರಿ ಬೈಕ್ ಹಾಗೂ ಕ್ಯಾಂಟರ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಹೊನಮಲ್ಲ ತೆರದಾಳ (31) ಹಾಗೂ ಪತ್ನಿ ಗಾಯತ್ರಿ (24) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಹೊನಮಲ್ಲ ಹಾಗೂ ಗಾಯತ್ರಿ ಇಬ್ಬರ ನಡುವೆ ವಿವಾಹ ಕಳೆದ ಮೇ 22ರಂದು ಆಗಿತ್ತು. ಸಂಬಂಧಿಕರ ಮಕ್ಕಳ ಹುಟ್ಟುಹಬ್ಬಕ್ಕೆ ಹೋಗಿ ವಾಪಸ್ ಬರುವಾಗ ಈ ದುರ್ಘಟನೆ ನಡೆದಿದ್ದು, ಮದುವೆಯಾಗಿ 24 ದಿನಗಳಲ್ಲಿ ಜೋಡಿ ಸಾವನ್ನಪ್ಪಿದೆ. ವಿಜಯಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.