ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಬ್ಬರಕ್ಕೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಬೆಳೆ ನಷ್ಟವಾಗಿದ್ದು, ವರುಣಾರ್ಭಟಕ್ಕೆ 8 ಮಂದಿ ಬಲಿಯಾಗಿದ್ದಾರೆ.
ರಾಜ್ಯದ 10 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, 8 ಸಾವಿರ ಎಕರೆಗೂ ಹೆಚ್ಚಿನ ಪ್ರದೇಶಗಳಲ್ಲಿ ಬೆಳೆ ಹಾನಿಯಾಗಿದೆ.
ಅಕಾಲಿಕ ಮಳೆಗೆ ರಾಜ್ಯದಲ್ಲೇ ಅತಿಹೆಚ್ಚು ಬೆಳೆ ನಷ್ಟ ಕೋಲಾರದಲ್ಲಿ ಆಗಿದ್ದು, 7,166 ಎಕರೆ ಬೆಳೆಹಾನಿಯಾಗಿದೆ. ಕೊಪ್ಪಳದಲ್ಲಿ 618 ಕ್ಕೂ ಹೆಚ್ಚು ಎಕರೆ, ದಾವಣಗೆರೆಯಲ್ಲಿ 153 ಎಕರೆ, ಚಿಕ್ಕಬಳ್ಳಾಪುರದಲ್ಲಿ 100 ಎಕರೆ, ಹಾವೇರಿಯಲ್ಲಿ 16 ಎಕರೆ, ಚಿತ್ರದುರ್ಗ 39 ಎಕರೆ, ಹಾವೇರಿಯಲ್ಲಿ 16 ಎಕರೆ ಬೆಳೆ ನಷ್ಟವಾಗಿದೆ.
ಮುಂಗಾರು ಪೂರ್ವ ಮಳೆಗೆ ರಾಜ್ಯದಲ್ಲಿ ಮತ್ತೆ ನಾಲ್ವರು ಬಲಿಯಾಗಿದ್ದಾರೆ. ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಬಲ್ಲಟಗಿ ಗ್ರಾಮದಲ್ಲಿ ಬೀರಪ್ಪ ಸಾಬಣ್ಣ (55) ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಬಾರಸೆ ಗ್ರಾಮದಲ್ಲಿ ಸ್ವಾಮಿ (18) ಎಂಬ ಯುವಕ ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಸಮೀಪದ ಚಿಕ್ಕಳ್ಳ ಬಳಿ ಮರ ಬಿದ್ದು ವೇಣುಗೋಪಾಲ್ (65) ಮೃತಪಟ್ಟಿದ್ದಾರೆ. ಬೆಂಗಳೂರಿನ ರಾಜಕಾಲುವೆಯಲ್ಲಿ ಲೋಕೇಶ್ (27) ಕೊಚ್ಚಿ ಹೋಗಿದ್ದಾನೆ. ಈ ಮೂಲಕ ರಾಜ್ಯದಲ್ಲಿ ಕಳೆದ ಎರಡು ದಿನದಲ್ಲಿ ಬಲಿಯಾದವರ ಸಂಖ್ಯೆ 10 ಕ್ಕೆ ಏರಿಕೆಯಾಗಿದೆ.
ಸಿಎಂ ಸಿದ್ದರಾಮಯ್ಯರಿಂದ ‘ವಿಡಿಯೋ ಕಾನ್ಪರೆನ್ಸ್’
ರಾಜ್ಯಾದ್ಯಂತ ಪೂರ್ವ ಮುಂಗಾರು ಮಳೆ ಅವಾಂತರ ಹಿನ್ನೆಲೆ ಇಂದು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಪರೆನ್ಸ್ ನಡೆಸಲಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸಂಭವಿಸಿದ ಮಳೆ ಅವಾಂತರದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ವಿಡಿಯೋ ಕಾನ್ಪರೆನ್ಸ್ ನಡೆಸಲಿದ್ದಾರೆ.ಮಳೆ ಅನಾಹುತದ ಬಗ್ಗೆ ಜಿಲ್ಲಾಧಿಕಾರಿಗಳು, ಹಿರಿಯ ಅಧಿಕಾರಿಗಳ ಬಳಿ ಸಿಎಂ ಸಿದ್ದರಾಮಯ್ಯ ಮಾಹಿತಿ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.