Breaking News

ಬಜರಂಗದಳ ಬ್ಯಾನ್​ ಮಾಡುವುದು ಮೂರ್ಖತನದ ಪರಮಾವಧಿ : ಬಿ ವೈ ವಿಜಯೇಂದ್ರ

Spread the love

ಬಾಗಲಕೋಟೆ : ಈಗಾಗಲೇ ಕಾಂಗ್ರೆಸ್​ ಪಕ್ಷ ಇಡೀ ದೇಶದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ.

ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ಬ್ಯಾನ್​ ಮಾಡುವುದಾಗಿ ಹೇಳಿ ಕಾಂಗ್ರೆಸ್ ಪಕ್ಷ ಇಡೀ‌ ದೇಶದಲ್ಲಿಯೇ ಬ್ಯಾನ್ ಆಗುವ ಪರಿಸ್ಥಿತಿಗೆ ಬಂದು ತಲುಪಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲೆಯ ‌ಮುಧೋಳ ಪಟ್ಟಣಕ್ಕೆ ಬಿಜೆಪಿ ಪರ ಪ್ರಚಾರಕ್ಕೆ ಆಗಮಿಸಿದ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಬಜರಂಗದಳ‌ ಬ್ಯಾನ್ ಮಾಡುವುದಾಗಿ ಹೇಳಿ ಕಾಂಗ್ರೆಸ್​ ಪಕ್ಷ ದೇಶದಲ್ಲಿ ಮಾತ್ರವಲ್ಲದೆ, ಕರ್ನಾಟಕದಲ್ಲೂ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಿದೆ. ದೇಶದ ಬಗ್ಗೆ ಚಿಂತನೆ ಮಾಡುವ ಒಂದು ಸಂಘಟನೆಯನ್ನು ನಿಷೇಧಿಸುವುದೆಂದರೆ, ಅದು ಮೂರ್ಖತನದ ಪರಮಾವಧಿ. ಜೊತೆಗೆ ಪಿಎಫ್​​ಐನಂತಹ ಸಂಘಟನೆಗಳಿಗೆ ಹೋಲಿಸುವುದೂ ಮೂರ್ಖತನ. ಕಾಂಗ್ರೆಸ್​​ ಪಕ್ಷದ ಸ್ಥಿತಿ ವಿನಾಶಕಾಲೇ ವಿಪರೀತ ಬುದ್ಧಿ ಎಂಬಂತಾಗಿದೆ. ಮನಸ್ಸಿನಲ್ಲಿರುವ ವಿಷವನ್ನು ಹೊರಹಾಕಿರುವುದು ದೇಶದ ದೃಷ್ಟಿಯಿಂದ ಮತ್ತು ರಾಜ್ಯದ ದೃಷ್ಟಿಯಿಂದ ಒಳ್ಳೆಯದು. ಈ ಬಾರಿ ರಾಜ್ಯದ ಜನತೆ ಕಾಂಗ್ರೆಸ್​ಗೆ ಅವಕಾಶ ನೀಡುವುದಿಲ್ಲ. ಅವರು ಅಧಿಕಾರಕ್ಕೆ ಬಂದರೆ ತಾನೆ ಬ್ಯಾನ್​ ಮಾಡುವುದು ಎಂದು ಹರಿಹಾಯ್ದರು.

 

ಪ್ರಧಾನಿ ನರೇಂದ್ರ ಮೋದಿ ಅವರು ಮಾಡುತ್ತಿರುವ ಅಭಿವೃದ್ಧಿ ಮತ್ತು ರಾಜ್ಯ ಬಿಜೆಪಿ ಸರ್ಕಾರ ಮಾಡುತ್ತಿರುವ ಅಭಿವೃದ್ಧಿಗೆ ಜನರು ಮನ್ನಣೆ ನೀಡುತ್ತಿದ್ದಾರೆ. ಈ‌ ಹಿನ್ನೆಲೆಯಲ್ಲಿ ‌ಈ ಬಾರಿ‌ ಬಿಜೆಪಿ ಪಕ್ಷ ಜಯ ಗಳಿಸುವುದು ಖಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಳಿಕ ಸಚಿವ ಗೋವಿಂದ ಕಾರಜೋಳ ಅವರ ಪರವಾಗಿ ‌ನಗರದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು.

ತೆರೆದ ವಾಹನ‌ದಲ್ಲಿ ರೋಡ್​ ಶೋ ನಡೆಸಿದ ವಿಜಯೇಂದ್ರ ಅವರ ಜೊತೆ, ಸಚಿವ ಗೋವಿಂದ ಕಾರಜೋಳ, ವಿಧಾನ ‌ಪರಿಷತ್ ಸದಸ್ಯರಾದ ಪಿ ಎಚ್ ಪೂಜಾರ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ವಿಜಯೇಂದ್ರ, ರಾಜ್ಯದ ಅಭಿವೃದ್ಧಿಗೆ ಈ ಬಾರಿ‌ ಬಿಜೆಪಿಯನ್ನು ಮತ್ತು ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರನ್ನು ಬೆಂಬಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದ್ರು.

ಬಜರಂಗದಳ ಬ್ಯಾನ್​ ವಿರೋಧಿಸಿ ರಾಜ್ಯಾದ್ಯಂತ ಹನುಮಾನ್​ ಚಾಲೀಸಾ ಪಠಣೆ : ಕಾಂಗ್ರೆಸ್​ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ಕುರಿತು ವಿಷಯ ಪ್ರಸ್ತಾಪಿಸಿರುವ ಹಿನ್ನೆಲೆ ವಿಶ್ವ ಹಿಂದೂ ಪರಿಷತ್​ ಮತ್ತು ಬಜರಂಗದಳ ರಾಜ್ಯಾದ್ಯಂತ ಇಂದು ಸಂಜೆ ಹನುಮಾನ್​ ಚಾಲೀಸಾ ಪಠಣೆಗೆ ಕರೆ ನೀಡಿದೆ.​ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್​ ನಡುವೆ ಬಜರಂಗ ದಳ ಬ್ಯಾನ್​ ವಿಚಾರದಲ್ಲಿ ವಾಕ್ಸಮರ ಮುಂದುವರೆದಿದೆ.


Spread the love

About Laxminews 24x7

Check Also

ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ತಾಲೂಕು ಆಡಳಿತಗಳು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿವೆ.

Spread the loveಶಿವಮೊಗ್ಗ/ಉತ್ತರಕನ್ನಡ: ರಾಜ್ಯದ ಮಲೆನಾಡು ಭಾಗದ ಹಲವೆಡೆ ಮತ್ತೆ ಮಳೆಯ ಆರ್ಭಟ ಮುಂದುವರೆದಿದೆ. ಭಾರಿ ವರ್ಷಧಾರೆ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ