ಹಿಡಕಲ್ ಜಲಾಶಯದಿಂದ ಜಿಆರ್ಬಿಸಿ, ಜಿಎಲ್ಬಿಸಿ ಹಾಗೂ ಸಿಬಿಸಿ ಕಾಲುವೆಗಳಿಗೆ ನಾಳೆಯಿಂದ 7 ದಿನಗಳವರೆಗೆ ನೀರು ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ
ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಮಾತ್ರ ನೀರನ್ನು ಬಳಕೆ ಮಾಡಲು ಮನವಿ ಮಾಡಿಕೊಂಡ ಬಾಲಚಂದ್ರ ಜಾರಕಿಹೊಳಿ
ಗೋಕಾಕ : ಹಿಡಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ, ಬಲದಂಡೆ ಹಾಗೂ ಸಿಬಿಸಿ ಕಾಲುವೆಗಳಿಗೆ ನಾಳೆ ದಿ. 22 ರಿಂದ 7 ದಿನಗಳವರೆಗೆ ಕುಡಿಯುವ ನೀರಿನ ಉದ್ಧೇಶಕ್ಕಾಗಿ 2.963 ಟಿಎಂಸಿ ನೀರನ್ನು ಬಿಡುಗಡೆ ಮಾಡಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಶುಕ್ರವಾರ ಸಂಜೆ ಮಾಧ್ಯಮಗಳಿಗೆ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, ಬೇಸಿಗೆಯಲ್ಲಿ ಸಾರ್ವಜನಿಕರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಬಳಕೆಗಾಗಿ ಮಾತ್ರ ನೀರನ್ನು ಬಿಡುಗಡೆ ಮಾಡಲು ಉದ್ಧೇಶಿಸಿರುವುದಾಗಿ ಹೇಳಿದರು.
ಗೋಕಾಕ, ಮೂಡಲಗಿ, ತಾಯಬಾಗ, ಚಿಕ್ಕೋಡಿ, ಹುಕ್ಕೇರಿ ಮತ್ತು ಮುಧೋಳ, ತಾಲೂಕಿನ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗಳಿಗೆ ಹಾಗೂ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ಧೇಶಕ್ಕಾಗಿ ಪ್ರಸ್ತುತ ಜಲಾಶಯದಲ್ಲಿನ ನೀರಿನ ಸಂಗ್ರಹ ಸಾಮಥ್ರ್ಯದಲ್ಲಿ ಪ್ರತಿದಿನ ಘಟಪ್ರಭಾ ಬಲದಂಡೆ ಕಾಲುವೆಗೆ(ಜಿಆರ್ಬಿಸಿ) 2000 ಕ್ಯೂಸೆಕ್ಸ್, ಎಡದಂಡೆ ಕಾಲುವೆಗೆ (ಜಿಎಲ್ಬಿಸಿ) 2400 ಕ್ಯೂಸೆಕ್ಸ್ ಹಾಗೂ ಚಿಕ್ಕೋಡಿ ಕಾಲುವೆಗೆ(ಸಿಬಿಸಿ) 500 ಕ್ಯೂಸೆಕ್ಸ್ನಂತೆ 7 ದಿನಗಳವರೆಗೆ ನಾಳೆ ದಿ. 22 ರ ಸಾಯಂಕಾಲ 6 ಗಂಟೆಯಿಂದ ದಿ. 29 ರ ಸಾಯಂಕಾಲ 6 ಗಂಟೆಯವರೆಗೆ ಒಟ್ಟು 2.963 ಟಿಎಂಸಿ ನೀರನ್ನು ಹರಿಸಲು ಬೆಳಗಾವಿ ಪ್ರಾದೇಶಿಕ ಆಯುಕ್ತರು ಈಗಾಗಲೇ ಆದೇಶಿಸಿದ್ದಾರೆ ಎಂದು ಅವರು ತಿಳಿಸಿದರು.
ಕಾಲುವೆಗಳಿಗೆ ಹರಿಬಿಡಲಾದ ನೀರನ್ನು ಕೇವಲ ಕುಡಿಯುವ ನೀರಿನ ಉದ್ಧೇಶಕ್ಕಾಗಿ ಮಾತ್ರ ಬಳಕೆ ಮಾಡುವಂತೆ ಸಾರ್ವಜನಿಕರಲ್ಲಿ ವಿನಂತಿಸಿಕೊಂಡ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಬೇಸಿಗೆಯ ಸಮಯದಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ನೀರನ್ನು ಬಿಡುಗಡೆ ಮಾಡುವಂತೆ ಕಳೆದ ದಿ. 12 ರಂದು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾಗಿ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.
ಫೋಟೋ ಬಾಲಚಂದ್ರ ಜಾರಕಿಹೊಳಿ, ಶಾಸಕರು ಹಾಗೂ ಅಧ್ಯಕ್ಷರು ಕೆಎಂಎಫ್, ಬೆಂಗಳೂರು.
Laxmi News 24×7