ಹಾವೇರಿ: ಯಾವ ರಾಜ್ಯದಲ್ಲಿ ಚುನಾವಣೆ ಪ್ರಾರಂಭ ಆಗುತ್ತದೋ, ಆ ರಾಜ್ಯದಲ್ಲಿ ವಿರೋಧ ಪಕ್ಷಗಳ ಮುಖಂಡರ ಮೇಲೆ ದಾಳಿ ನಾಡೆಯುತ್ತವೆ. ಬಿಜೆಪಿ ಸರ್ಕಾರ ಬಂದ ಮೇಲೆ ಇದು ನಡೆದುಕೊಂಡು ಬಂದಿದ್ದು, ಬಿಜೆಪಿಯವರ ಚುನಾವಣೆ ಕ್ರಮವೇ ಅದು. ಗುಜರಾತ್ ಘಟನೆ ನೈಜ ಚಿತ್ರಣ ಮಾಡಿದರು ಅಂತ ಹೇಳಿ ಬಿಬಿಸಿಯವರನ್ನೇ ಬಿಡಲಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ರಾಣೆಬೆನ್ನೂರು ತಾಲೂಕು ಹಲಗೇರಿ ಗ್ರಾಮದಲ್ಲಿ ಮಾತನಾಡಿ, ವಿರೋಧ ಪಕ್ಷಗಳ ಮುಖಂಡರ ಮೇಲೆ ಐಟಿ ರೈಡ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ಇನ್ನೂ ಮೂರು ತಿಂಗಳು ನಡೆಯುತ್ತದೆ. ಎಷ್ಟೆ ಚರ್ಚೆ ಮಾಡಿದರೂ ಅಷ್ಟೆ. ಲೋಕಸಭೆ ಚುನಾವಣೆಯಲ್ಲಿಯೂ ಇದೇ ಕೆಲಸ ಮಾಡಿದರು. ಈಗಲೂ ಅದನ್ನೇ ಮಾಡುತ್ತಿದ್ದಾರೆ. ರೈಡು,ಗೀಡು ಏನು ಮಾಡುತ್ತಾರೋ ಮಾಡಿಕೊಂಡು ಹೋಗಲಿ. ಬಿಜೆಪಿಯವರು ಮಹಾನ್ ಹರಿಶ್ಚಂದ್ರರು. ಬಿಜೆಪಿಯವರು ಚುನಾವಣೆಗೆ ದುಡ್ಡೇ ಖರ್ಚು ಮಾಡಲ್ಲ, ಬಡತನದಲ್ಲಿ ಚುನಾವಣೆ ಮಾಡುತ್ತಾರೆ. ಬಿಜೆಪಿಯವರು ಕೈ ಮುಗಿದುಕೊಂಡು ಹೋಗಿ ಚುನಾವಣೆ ನಡೆಸುತ್ತಾರೆ ಎಂದು ಕಿಡಿ ಕಾರಿದರು.