ಬೆಳಗಾವಿ: ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ಈಚೆಗೆ ರೈತ ಹೋರಾಟಗಾರ, ಕಬ್ಬು ನಿಯಂತ್ರಣ ಮಂಡಳಿ ಸದಸ್ಯ ಸಿದಗೌಡ ಮೋದಗಿ ಅವರ ಮೇಲೆ ಕೆಲವರು ಹಲ್ಲೆಗೆ ಯತ್ನಿಸಿದ್ದಾರೆ. ಆರೋಪಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಕೋರಿ ವಿವಿಧ ಸಂಘಟನೆಗಳು ಸದಸ್ಯರು ಸೋಮವಾರ ನಗರ ಪೊಲೀಸ್ ಕಮಿಷನರ್ಗೆ ಮನವಿ ಸಲ್ಲಿಸಿದರು.
‘ಸಿದಗೌಡ ಮೋದಗಿ ಅವರು ಫೆ.4ರಂದು ಕಾರ್ಖಾನೆಗೆ ನಾಮನಿರ್ದೇಶನ ಸಂಬಂಧ ವರದಿ ಮಾಡಿದ ನಂತರ, ಅವರನ್ನು ಕಾರ್ಖಾನೆಯ ಒಂದು ಕೋಣೆಯಲ್ಲಿ ನಾಲ್ಕು ತಾಸು ಕೂಡಿ ಹಾಕಲಾಯಿತು. ಕೊಲೆ ಬೆದರಿಕೆ ಕೂಡ ಹಾಕಲಾಯಿತು. ಇದರಲ್ಲಿ ಕಾರ್ಖಾನೆಯ ಆಡಳಿತ ಮಂಡಳಿಯ ಕೆಲ ಸದಸ್ಯರು ಹಾಗೂ ಹೊರಗಿನ ವ್ಯಕ್ತಿಗಳೂ ಇದ್ದಾರೆ. ಕೊನೆಗೆ ಬಲವಂತದಿಂದ ರಾಜೀನಾಮೆ ಕೂಡ ಬರೆಸಿಕೊಂಡಿದ್ದಾರೆ’ ಎಂದು ಮನವಿಯಲ್ಲಿ ದೂರಲಾಗಿದೆ.
‘ಘಟನೆ ನಡೆದ ಸಂದರ್ಭದಲ್ಲಿ ಭದ್ರತಾ ಅಧಿಕಾರಿ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರೂ ಈ ನಾಮನಿರ್ದೇಶನ ಸಂಬಂಧ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಅವರ ಮೇಲೆ ಕೂಡ ಕ್ರಮ ವಹಿಸಬೇಕು. ನೊಂದವರಿಗೆ ಭದ್ರತೆ ಒದಗಿಬೇಕು’ ಎಂದೂ ಮನವಿಯಲ್ಲಿ ಕೋರಲಾಗಿದೆ.
ಮನವಿಯನ್ನು ಸಕ್ಕರೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗೂ ರವಾನಿಸಲಾಗಿದೆ. ಗಂಗಾರಾಮ ಸುರೇಶ ಕಮ್ಮಾರ, ಬಸವರಾಜ ದೊಡಮನಿ, ಯಲಗೌಡ ಗಿಡಗೇರಿ, ವೀರಭದ್ರ ಮಳಗಲಿ, ಶಂಕರ ಕಾರಗಿ, ಶಂಕರ ಅಂಬಲಿ, ಜಿ.ವಿ. ಕುಲಕರ್ಣಿ, ಶಿವಲೀಲಾ ಮಿಸಳೆ, ಶಂಕರ ಢವಳ ಸೇರಿದಂತೆ ಹಲವರು ಇದ್ದರು.