ಬೆಳಗಾವಿ: ‘ಕಳಸಾ-ಬಂಡೂರಿ ನಾಲಾ ಯೋಜನೆ ಕಾಮಗಾರಿಯನ್ನು ಒಂದೇ ವರ್ಷದಲ್ಲಿ ಪೂರ್ಣಗೊಳಿಸದಿದ್ದರೆ ನನ್ನ ಹೆಸರು ಗೋವಿಂದ ಕಾರಜೋಳ ಅಲ್ಲ’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
‘ಒಂದು ತಿಂಗಳಲ್ಲಿ ಕಾಮಗಾರಿಗೆ ಚಾಲನೆ ನೀಡುತ್ತೇನೆ.
ಏನೇ ಅಡ್ಡಿಗಳಿದ್ದರೂ ವರ್ಷ ಉರುಳುವುದರಲ್ಲಿ ಎಲ್ಲವನ್ನೂ ಮುಗಿಸುತ್ತೇನೆ’ ಎಂದು ಅವರು ನಗರದಲ್ಲಿ ಸೋಮವಾರ ಮಾಧ್ಯಮದವರಿಗೆ ಮಾಹಿತಿ ನೀಡಿದರು.
‘ಇದರ ‘ಸಮಗ್ರ ಯೋಜನಾ ವರದಿ’ಗೆ ಕೇಂದ್ರ ಜಲ ಆಯೋಗ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟ್ವಿಟರ್ನಲ್ಲಿ ಹಂಚಿಕೊಂಡ ದಾಖಲೆಗಳಲ್ಲಿ ದಿನಾಂಕವೇ ಇಲ್ಲ’ ಎಂದು ಹೇಳಿಕೆ ನೀಡಿದ ಶಾಸಕ ಎಚ್.ಕೆ. ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದ ಕಾರಜೋಳ, ‘2022ರ ಡಿ.29ರಂದು ಜಲಸಂಪನ್ಮೂಲ ಇಲಾಖೆ ನಿರ್ದೇಶಕರು ಸಹಿ ಮಾಡಿದ್ದಾರೆ’ ಎಂದರು.
‘2007ರ ಮಾ.23ರಂದು ಗೋವಾದಲ್ಲಿ ಸೋನಿಯಾ ಗಾಂಧಿ ಭಾಷಣ ಮಾಡಿ, ಕರ್ನಾಟಕಕ್ಕೆ ಒಂದು ಹನಿ ಮಹದಾಯಿ ನೀರನ್ನು ನೀಡುವುದಿಲ್ಲ ಎಂದಿದ್ದರು. ಅದಕ್ಕೆ ನಿಮ್ಮ ಉತ್ತರವೇನು’ ಎಂದು ಎಚ್.ಕೆ.ಪಾಟೀಲ ಅವರಿಗೆ ಪ್ರಶ್ನೆ ಮಾಡಿದರು.