ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಕೇಂದ್ರ ಕಚೇರಿಯನ್ನು ಶನಿವಾರ ಅಪರಿಚಿತರು ಕರೆ ಮಾಡಿ ಬಾಂಬ್ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಪೊಲೀಸ್ ಕಂಟ್ರೋಲ್ ರೂಂಗೆ ಮಧ್ಯಾಹ್ನ 1 ಗಂಟೆಗೆ ಫೋನ್ ಕರೆ ಬಂದಿದ್ದು, ಮಹಲ್ ಪ್ರದೇಶದಲ್ಲಿನ ಆರ್ಎಸ್ಎಸ್ ಕೇಂದ್ರ ಕಚೇರಿಯನ್ನು ಬಾಂಬ್ನಿಂದ ಸ್ಫೋಟಿಸುವುದಾಗಿ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದಾನೆ ಎಂದು ವಲಯ ಡಿಸಿಪಿ ಗೋರಖ್ ಭಮ್ರೆ ಹೇಳಿದ್ದಾರೆ.
ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ (ಬಿಡಿಡಿಎಸ್) ಮತ್ತು ಶ್ವಾನ ದಳವನ್ನು ಕರೆಸಿ ಆವರಣವನ್ನು ಕೂಲಂಕಷವಾಗಿ ಪರಿಶೀಲಿಸಿದರೂ ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ ಎಂದು ಅವರು ಹೇಳಿದರು.
ಮುನ್ನೆಚ್ಚರಿಕೆ ಕ್ರಮವಾಗಿ ಗಸ್ತು ತೀವ್ರಗೊಳಿಸಲಾಗಿದ್ದು, ಕರೆ ಮಾಡಿದವರನ್ನು ಗುರುತಿಸಲು ಪೊಲೀಸರು ಫೋನ್ ಸಂಖ್ಯೆಯನ್ನು ಟ್ರ್ಯಾಕ್ ಮಾಡುತ್ತಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.