ಬೆಳಗಾವಿ: ಕುಕ್ಕರ್ ಪ್ರಕರಣದಂತಹ ಗಂಭೀರ ವಿಚಾರವನ್ನೂ ಮತಬ್ಯಾಂಕ್ ಉದ್ದೇಶದಿಂದ ಹಗುರಗೊಳಿಸುವಂತಹ ಹೇಳಿಕೆ ಖಂಡನೀಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ಅವರು ಶಾಸಕ ಸಿ.ಟಿ.ರವಿ ಅವರ ಭಯೋತ್ಪಾದನೆ ಕುರಿತ ನಿಯಮ 69ರಡಿಯ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿ, ಕುಕ್ಕರ್ ಬ್ಲಾಸ್ಟ್ ಆಕಸ್ಮಿಕವಾಗಿ ನಡೆದಿದೆ.
ಒಂದು ವೇಳೆ ಅದು ಜನನಿಬಿಡ ಪ್ರದೇಶದಲ್ಲಿ ಸ್ಫೋಟಿಸಿ ದೊಡ್ಡ ಪ್ರಮಾಣದ ಸಾವುನೋವು ಉಂಟಾಗಿದ್ದರೆ ಏನಾಗುತ್ತಿತ್ತು ಎನ್ನುವುದನ್ನು ಗಮನದಲ್ಲಿರಿಸಬೇಕು ಎಂದು ತಿಳಿಸಿದರು.
ಪೊಲೀಸರ ದೊಡ್ಡ ಲೋಪ
ಉಪನಾಯಕ ಯು.ಟಿ. ಖಾದರ್ ಮಾತನಾಡಿ, ಕುಕ್ಕರ್ ಪ್ರಕರಣ ಹಿಂದೆ ಒಮ್ಮೆ ಬಂಧಿತನಾಗಿ ಜಾಮೀನಿನಲ್ಲಿ ಹೊರಗೆ ಬಂದಿದ್ದ, ಆತ ಮೂಲಭೂತವಾದಿ ಎಂದು ಗೊತ್ತಿದ್ದರೂ ಆತನ ಮೇಲೆ ಪೊಲೀಸರು ನಿಗಾ ಇರಿಸದೆ ಆತ ತಲೆಮರೆಸಿಕೊಳ್ಳುವಂತಾಗಿರುವುದು ದೊಡ್ಡ ಲೋಪ, ಆತ ಮೈಸೂರಿನಲ್ಲೇ ಇದ್ದರೂ ಗೊತ್ತಾಗಲಿಲ್ಲ, ಇದು ವೈಫಲ್ಯ ಎಂದರು.
ಶಾರೀಕ್ನಿಂದ ಹೇಳಿಕೆ ಸಂಗ್ರಹ: ಆರಗ
ಮಂಗಳೂರಿನ ಕುಕ್ಕರ್ ಪ್ರಕರಣದ ಆರೋಪಿ, ಶಂಕಿತ ಉಗ್ರ ಶಾರೀಕ್ಗೆ ರಾಷ್ಟ್ರೀಯ ತನಿಖಾ ದಳದವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ಆತ ಚೇತರಿಸಿಕೊಂಡಿದ್ದಾನೆ. ಹೇಳಿಕೆಗಳನ್ನೂ ನೀಡುತ್ತಿದ್ದಾನೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು. ಶಾರೀಕ್ ಹಿಂದೆ ಉಗ್ರ ಪರ ಗೋಡೆಬರಹ ಪ್ರಕರಣದಲ್ಲಿ ಜಾಮೀನು ಪಡೆದು ಬಳಿಕ ತಲೆಮರೆಸಿಕೊಂಡಿದ್ದ, ಆತನ ಮೊಬೈಲ್ ಫೋನ್ ಕೂಡ ಬಳಕೆ ಮಾಡದ ಕಾರಣ ಆತನ ಮೇಲೆ ನಿಗಾ ಇಡುವಲ್ಲಿ ಪೊಲೀಸರು ವಿಫಲರಾದರು ಎಂದು ತಿಳಿಸಿದರು.