ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಚಿತಾ ರಾಮ್ ನಟನೆಯ ಕ್ರಾಂತಿ ಚಿತ್ರದ ಎರಡನೇ ಹಾಡು ‘ಬೊಂಬೆ ಬೊಂಬೆ’ಯನ್ನು ಬಳ್ಳಾರಿಯ ಹೊಸಪೇಟೆ ಪಟ್ಟಣದಲ್ಲಿ ಬಿಡುಗಡೆ ಮಾಡಲಾಯಿತು. ಅಲ್ಲಿನ ಡ್ಯಾಮ್ ರಸ್ತೆಯಲ್ಲಿರುವ ವಾಲ್ಮೀಕಿ ವೃತ್ತದಲ್ಲಿ ಹಾಡು ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಆರಂಭವಾಗುವ ಮುನ್ನವೇ ಹೊಸಪೇಟೆಯಲ್ಲಿ ಪುನೀತ್ ರಾಜ್ ಕುಮಾರ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ವಾರ್ ಶುರುವಾಗಿತ್ತು. ಕ್ರಾಂತಿ ಹಾಡು ಬಿಡುಗಡೆ ಸಮಾರಂಭದಲ್ಲಿ ಜಮಾಯಿಸಿದ್ದ ಪುನೀತ್ ಫ್ಯಾನ್ಸ್ ಅಪ್ಪು ಕಟ್ ಔಟ್ ಹಿಡಿದು ಅಪ್ಪುಗೆ ಜೈಕಾರ ಹಾಕಿ ವೇದಿಕೆ ಏರಿದ್ದರು.
ಹೀಗೆ ಪುನೀತ್ ರಾಜ್ ಕುಮಾರ್ ಹಾಗೂ ದರ್ಶನ್ ಅಭಿಮಾನಿಗಳ ಫ್ಯಾನ್ ವಾರ್ ಮತ್ತೊಂದು ಹಂತ ಎಂದು ಪ್ರವೇಶಿಸಿತ್ತು. ಈ ಫ್ಯಾನ್ ವಾರ್ ಮತ್ಯಾವ ಹಂತಕ್ಕೆ ತಲುಪುತ್ತದೆಯೋ ಎನ್ನುವಷ್ಟರಲ್ಲಿ ಹೊಸಪೇಟೆಯಲ್ಲಿನ ಅಪ್ಪು ಪುತ್ಥಳಿಗೆ ದರ್ಶನ್ ಮಾಲಾರ್ಪಣೆ ಮಾಡಿದರು. ಇದರಿಂದ ಫ್ಯಾನ್ ವಾರ್ ಕಡಿಮೆ ಆಯಿತು ಹಾಗೂ ದರ್ಶನ್ ಹಾಡು ಬಿಡುಗಡೆ ಮಾಡಲು ಅಭಿಮಾನಿಗಳ ಸಮ್ಮುಖದಲ್ಲಿ ವೇದಿಕೆ ಏರಿದ್ದರು. ವೇದಿಕೆ ಮೇಲೆ ರಚಿತಾ ರಾಮ್ ಚಿತ್ರದ ಕುರಿತು ಹಾಗೂ ಹಾಡಿನ ಕುರಿತು ರಚಿತಾ ರಾಮ್ ಮಾತನಾಡುತ್ತಿದ್ದಾಗ ಯಾರೋ ಕಿಡಿಗೇಡಿ ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದಾನೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಕುರಿತು ಇದೀಗ ನಟ ಹಾಗೂ ದರ್ಶನ್ ಅಭಿಮಾನಿ ಧನ್ವೀರ್ ಪ್ರತಿಕ್ರಿಯೆ ನೀಡಿದ್ದಾರೆ.