ಬೆಂಗಳೂರು: ಸೈಕ್ಲೋನ್ ಕಾರಣದಿಂದಾಗಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ( Rain in Bangalore ) ತುಂತುರು ಮಳೆಯ ( Rain ) ಜೊತೆಗೆ, ಚಳಿ ಕೂಡ ಜನರನ್ನು ನಡುಗಿಸಿದೆ. ಈ ನಡುವೆಯೂ ಇನ್ನೂ ಮೂರು ದಿನ ಬೆಂಗಳೂರಿನಲ್ಲಿ ಮಳೆ ಮುಂದುವರೆಯಲಿದೆ ಎಂಬುದಾಗಿ ಹವಾಮಾನ ಇಲಾಖೆ ( Meteorological Department ) ಮುನ್ಸೂಚನೆ ನೀಡಿದೆ.
ಬೆಂಗಳೂರಿನ ವಿಧಾನಸೌಧ, ಕಾರ್ಪೋರೇಷನ್, ಮೈಸೂರು ಬ್ಯಾಂಕ್ ಸರ್ಕಲ್, ಕೆ ಆರ್ ಮಾರ್ಕೇಟ್, ಶಾಂತಿನಗರ, ಲಾಲ್ ಬಾಗ್, ಬನಶಂಕರಿ, ಮಲ್ಲೇಶ್ವರಂ, ಜೆಪಿ ನಗರ ಸೇರಿದಂತೆ ಹಲವೆಡೆ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಈ ನಡುವೆಯೂ ಮತ್ತೆ ಮೂರು ದಿನ ಮಳೆಯಾಗಲಿದೆ.
ಈ ಬಗ್ಗೆ ಮಾಹಿತಿ ನೀಡಿರುವಂತ ಹವಾಮಾನ ತಜ್ಞ ಆರ್ ಪ್ರಸಾದ್ ಅವರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನಿನ್ನೆ ಹೆಚ್ಚು ಮಳೆಯಾಗಿದೆ. ಕೋಲಾರದಲ್ಲಿ 8 ಸೆಂ.ಮೀ ಹಾಗೂ ಚಿಕ್ಕಬಳ್ಳಾಪುರದಲ್ಲಿ 7 ಸೆಂ.ಮೀ ಮಳೆಯಾಗಿದೆ. ದಾವಣಗೆರೆಯಲ್ಲಿ ನಿನ್ನೆ 13 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ ಎಂದಿದ್ದಾರೆ.
ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹೆಚ್ಚು ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲೂ ಇನ್ನೂ ಮೂರು ದಿನ ಮಳೆಯಾಗಲಿದೆ. ಕರಾವಳಿ ಭಾಗದಲ್ಲಿ ಗುಡುಗು, ಮಿಂಚಿನ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂಬುದಾಗಿ ತಿಳಿಸಿದ್ದಾರೆ.