ಬೆಳಗಾವಿ ರಾಮತೀರ್ಥ ನಗರದಲ್ಲಿ ಸಾರ್ವಜನಿಕ ಜಾಗದಲ್ಲಿ ಅನಧಿಕೃತವಾಗಿ ಕಟ್ಟಿದ್ದ ಕಟ್ಟಡಗಳನ್ನು ಬುಡಾ ಅಧಿಕಾರಿಗಳು ತೆರವು ಮಾಡಿದ್ದಾರೆ.
ಹೌದು ಮಂಗಳವಾರ ಬೆಳಿಗ್ಗೆ ಜೆಸಿಬಿಗಳ ಸಹಾಯದಿಂದ ರಾಮತೀರ್ಥ ನಗರದಲ್ಲಿ ಯೋಜನೆ ಸಂಖ್ಯೆ 35, 40, 41ರಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಮೀಸಲಿಟ್ಟಿದ್ದ ಜಾಗದಲ್ಲಿ ಅನಧಿಕೃತವಾಗಿ ಕಟ್ಟಿದ್ದ ಕಟ್ಟಡಗಳನ್ನು ನೆಲಸಮಗೊಳಿಸಲಾಯಿತು.
ಈ ಸಂಬಂಧ ಮಾತನಾಡಿದ ಬುಡಾ ಎಇಇ ಮಹಾಂತೇಶ ಹಿರೇಮಠ ಅವರು ಯಾವುದೇ ಅನಧಿಕೃತ ಮನೆಗಳನ್ನು ಯಾರೂ ಕೂಡ ಕಟ್ಟಬಾರದು. ಪ್ರಾಧಿಕಾರಕ್ಕಾಗಿ ನಾವು ವಶಪಡಿಸಿಕೊಂಡಿರುವ ಅಥವಾ ಜನರ ಜೊತೆ ಸಹಭಾಗಿತ್ವದಲ್ಲಿ ತೆಗೆದುಕೊಂಡಿರುವ ಜಾಗದಲ್ಲಿ ಯಾರೂ ಅನಧಿಕೃತ ಕಟ್ಟಡ ಕಟ್ಟಬಾರದು. ಒಂದು ವೇಳೆ ಕಟ್ಟಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಈ ರೀತಿ ತೆರವುಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಒಟ್ಟಿನಲ್ಲಿ ಮನೆ ಅಥವಾ ಇನ್ಯಾವುದೋ ಕಟ್ಟಡ ಕಟ್ಟುವಾಗ ನಿಮ್ಮ ಅಧಿಕೃತ ಜಾಗದಲ್ಲಿಯೇ ಕಟ್ಟಿ. ಇಲ್ಲದಿದ್ರೆ ಇದೇ ರೀತಿ ಅಧಿಕಾರಿಗಳು ನೆಲಸಮಗೊಳಿಸುತ್ತಾರೆ. ಹೀಗಾಗಿ ಎಲ್ಲರೂ ಎಚ್ಚರಿಕೆ ವಹಿಸುವ ಅವಶ್ಯಕತೆಯಿದೆ.