ಬೆಂಗಳೂರು ಸೇರಿದಂತೆ ಇನ್ನುಳಿದ ನಗರಪಾಲಿಕೆಯ ಪೌರಕಾರ್ಮಿಕರನ್ನು ಶೀಘ್ರದಲ್ಲೇ ಸರ್ಕಾರಿ ನೌಕರರನ್ನಾಗಿ ಪರಿಗಣಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಬಿಬಿಎಂಪಿ ವ್ಯಾಪ್ತಿಯಲ್ಲಿ ಭಗವಾನ್ ಬುದ್ಧ ಬಾಬಾ ಸಾಹೇಬ್ ಡಾ: ಬಿ.ಆರ್. ಅಂಬೇಡ್ಕರ್ ಲೇಕ್ ಪಾರ್ಕ್ ಉದ್ಯಾನವನ ನಾಮಕರಣ ಸಮಾರಂಭವನ್ನು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿಯವರು ಭಗವಾನ್ ಬುದ್ಧನ ಮತ್ತು ಭಾರತರತ್ನ ಡಾ.ಬಾಬಾಸಾಹೇಬ್ರ ತತ್ವಾದರ್ಶಗಳು ಅನುಸರಣಿಯವಾಗಿವೆ. ಇಂದು ದೇಶದಲ್ಲಿ ಪ್ರಜಾಪ್ರಭುತ್ವ ನೆಲೆಸಿರುವುದು ಬಾಬಾಸಾಹೇಬ್ ಅಂಬೇಡ್ಕರರಿಂದ. ಸಂವಿಧಾನದ ಅಡಿಯಲ್ಲಿ ಇಂದು ದೇಶ ಮುನ್ನಡೆಯುತ್ತಿದೆ. ಬಾಬಾಸಾಹೇಬ್ರಿಗೆ ನಾವೆಲ್ಲರೂ ಸದಾ ಚಿರಋಣಿಯಾಗಿರಬೇಕು. ಮೀಸಲಾತಿಯನ್ನು ಹೆಚ್ಚಿಸುವ ವೇಳೆ ಅನೇಕರು ವಿರೋಧಿಸಿದರೂ, ಮಾನವೀಯ ಮೌಲ್ಯಗಳನ್ನು ಪರಿಗಣಿಸಿ ಮೀಸಲಾತಿಯನ್ನು ಹೆಚ್ಚಿಸಲಾಗಿದೆ. ಆಡಳಿತಗಾರರಿಗೆ ದಯೆ ಮತ್ತು ಕರುಣೆ ಇರಬೇಕು ಎಂದರು.
ಸದಾಕಾಲ ನನಗೆ ಬುದ್ಧ-ಬಸವ-ಅಂಬೇಡ್ಕರರು ಪ್ರೇರಣಾದಾಯಿಯಾಗಿದ್ದಾರೆ. ಸಾಮಾಜೀಕ ನ್ಯಾಯವನ್ನು ನೀಡುವುದು ಕೇವಲ ಬಂಡವಾಳವಾಗಿಸಿಕೊಂಡಿರುವವರೇ ಹೆಚ್ಚು. ನಿಜವಾಗಿ ಅವಶ್ಯಕತೆ ಇದ್ದವರಿಗೆ ಇಂದಿಗೂ ನ್ಯಾಯ ಸಿಕ್ಕಿಲ್ಲ. ಇದೇ ವೇಳೆ ಬೆಂಗಳೂರು ಸೇರಿದಂತೆ ಇನ್ನುಳಿದ ನಗರಪಾಲಿಕೆಯ ಪೌರಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿಸಲು ಕ್ರಮಕೈಗೊಳ್ಳಲಾಗುವುದು.