ಬೆಳಗಾವಿಯಲ್ಲಿ ಪರಂಪರಾಗತ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನಿಯಮಗಳನ್ನು ಪಾಲಿಸಿ ಡಾಲ್ಬಿ ಬಳಕೆಗೆ ಅಧಿಕಾರಿಗಳು ಹಾಗೂ ಮಂತ್ರಿಗಳೊಂದಿಗೆ ಚರ್ಚಿಸಿ ಅನುಮತಿಯನ್ನು ನೀಡಲಾಗಿದೆ. ಹಾಗಾಗಿ ಎಲ್ಲಾ ಗಣೇಶ ಮಂಡಳದವರು ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಿ ಡಾಲ್ಬಿ ಬಳಕೆ ಮಾಡಬೇಕೆಂದು ಶಾಸಕ ಅಭಯ್ ಪಾಟೀಲ್ ಮನವಿ ಮಾಡಿದ್ದಾರೆ.
ಬೆಳಗಾವಿ ನಗರದಲ್ಲಿ ಸೆಪ್ಟೆಂಬರ್ ೯ ರಂದು ಅಂತಿಮವಾಗಿ ಗಣೇಶೋತ್ಸವ ವಿಸರ್ಜನೆ ಮಾಡುವ ಹಿನ್ನೆಲೆಯಲ್ಲಿ ಅಲ್ಲಿ ಮಾಡಿಕೊಳ್ಳಬೇಕಾದ ಅಗತ್ಯ ಸಿದ್ದತೆಗಳನ್ನು ಕುರಿತಂತೆ ಲೋಕಮಾನ್ಯ ಗಣೇಶ ಮಹಾಮಂಡಳ ನೇತೃತ್ವದಲ್ಲಿ ಶಾಸಕರಾದ ಅಭಯ್ ಪಾಟೀಲ್, ಅನೀಲ್ ಬೆನಕೆ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಮಹಾಂತೇಶ್ ಕವಟಗಿಮಠ್, ಸೇರಿದಂತೆÀ ಅನೇಕ ಗಣೇಶ ಮಂಡಳಿಗಳ ಅಧ್ಯಕ್ಷರು ಹಾಗೂ ಸದಸ್ಯರು ಇಂದು ರವಿವಾರ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿ ಡಾಲ್ಬಿ ಬಳಕೆಗೆ ಅನುಮತಿ ನೀಡುವಂತೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆಯನ್ನು ನಡೆಸಿದರು.
ಈ ವೇಳೆ ಚರ್ಚೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಅಭಯ್ ಪಾಟೀಲ್ರವರು, ಬೆಳಗಾವಿಯಲ್ಲಿ ಪರಂಪರಾಗತ ಗಣೇಶ ವಿಸರ್ಜನೆ ಕುರಿತಂತೆ ಚರ್ಚೆಯನ್ನು ನಡೆಸಲು ಇಂದು ನಾವು ಎಸ್ಪಿ ಕಚೇರಿಗೆ ಆಗಮಿಸಿದ್ದೇವೆ. ಈಗಾಗಲೇ ನಾವು ಗಣೇಶ ವಿಸರ್ಜನೆ ವೇಳೆ ಡಾಲ್ಬಿ ಬಳಕೆ ಕುರಿತಂತೆ ಮಂತ್ರಿಗಳು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆಯನ್ನು ನಡೆಸಿದ್ದೇವೆ. ಇನ್ನು ಸುಪ್ರೀಂಕೋರ್ಟ್ ಆದೇಶದಂತೆ ನಿಯಮಗಳನ್ನು ಪಾಲಿಸಿ ಡಾಲ್ಬಿ ಬಳಕೆ ಮಾಡುವಂತೆ ನಾವು ಈಗಾಗಲೇ ಎಲ್ಲಾ ಗಣೇಶ ಮಂಡಳಿಗಳಿಗೆ ಮನವಿ ಮಾಡಿದ್ದೇವೆ. ಡಾಲ್ಬಿಗಳೊಂದಿಗೆ ಗಣೇಶೋತ್ಸವ ಆಚರಣೆ ಮಾಡಬೇಕೆಂಬ ಎಲ್ಲರ ಆಶಯ ಈ ಮೂಲಕ ಸಂತೃಪ್ತಿಯಾದಂತಾಗಿದೆ. ಹಾಗಾಗಿ ಎಲ್ಲಾ ಗಣೇಶ ಮಂಡಳಗಳಿಗೆ ಈ ಕುರಿತಂತೆ ಗಣೇಶ ಮಹಾಮಂಡಳದ ಅಧ್ಯಕ್ಷರು ಮಾಹಿತಿಯನ್ನು ನೀಡಲಿದ್ದಾರೆ. ಎಲ್ಲರೂ ನಿಯಮಗಳನ್ನು ಪಾಲಿಸಬೇಕೆಂದು ಮನವಿ ಮಾಡಿದರು.
ಬೆಳಗಾವಿ ನಗರದಲ್ಲಿ ಗಣೇಶ ವಿಸರ್ಜನೆಯ ವೇಳೆ ಡಾಲ್ಬಿ ಬಳಕೆಗೆ ಅವಕಾಶ ನೀಡುವಂತೆ ಹಮ್ಮಿಕೊಳ್ಳಲಾಗಿದ್ದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಅನೀಲ್ ಬೆನಕೆ, ಈ ಸಂದರ್ಭದಲ್ಲಿ ಚರ್ಚೆಯಲ್ಲಿರುವ ವಿಷಯ ಎಂದರೆ ಡಾಲ್ಬಿ ಬಳಕೆಗೆ ಅವಕಾಶ ನೀಡಬೇಕೆಂಬುದು. ಈ ಕುರಿತಂತೆ ನಾವು ಈಗಾಗಲೇ ಗಣೇಶ ಮಂಡಳಗಳ ಅಧ್ಯಕ್ಷರು, ಸದಸ್ಯರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದ್ದೇವೆ. ಹಾಗಾಗಿ ನಗರದಲ್ಲಿ ಗಣೇಶ ವಿಸರ್ಜನೆ ವೇಳೆ ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಪಾಲಿಸಿ ಡಾಲ್ಬಿ ಬಳಕೆಗೆ ಅನುಮತಿಯನ್ನು ನೀಡಲಾಗಿದೆ. ಹಾಗಾಗಿ ಎಲ್ಲಾ ಗಣೇಶ ಮಂಡಳಿಗಳು ನ್ಯಾಯಾಲಯದ ಆದೇಶವನ್ನು ಪಾಲಿಸಿ ಡಿಜೆ ಬಳಕೆ ಮಾಡುವಂತೆ ಗಣೇಶ ಮಂಡಳಿಯವರು ಮುಂದಾಗಬೇಕು ಎಂದರು.