ಬೆಳಗಾವಿ: ನಿಮಗೆ ಏಕೆ ಕೊಡಬೇಕು ಕಪ್ಪ ಎಂದು ಗಟ್ಟಿ ಧ್ವನಿಯಲ್ಲಿ ಹೇಳುತ್ತ, ಬ್ರಿಟಿಷರೇ ದೇಶ ಬಿಟ್ಟು ತೊಲಗಿ ಎಂದು ಗುಡುಗು ಹಾಕಿದ ಕನ್ನಡನಾಡಿನ ಸಾಹಸಿ ಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿದವರು, ಸ್ವಾತಂತ್ರ್ಯ ಸ್ವಾಭಿಮಾನದ ಸಾಕಾರಮೂರ್ತಿ ಕಿತ್ತೂರಿನ ರಾಣಿ ಚೆನ್ನಮ್ಮ. ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಅವರ ಹೆಂಡತಿ ರಾಣಿ ಚೆನ್ನಮ್ಮ. ತಮ್ಮ ಪುಟ್ಟ ರಾಜ್ಯದ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಸೆಟೆದು ನಿಂತು ನಡೆಸಿದ ಹೋರಾಟ, ಅಲ್ಲಿ ತೋರಿದ ಧೈರ್ಯ, ಸಾಹಸ ಚೆನ್ನಮ್ಮರನ್ನು ಅಜರಾಮರವಾಗಿಸಿದೆ.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬೆಳಗಾವಿ ಜಿಲ್ಲೆಯ ಕಿತ್ತೂರು ಸಾಮ್ರಾಜ್ಯ ತನ್ನದೇ ಆದ ಕೊಡುಗೆ ನೀಡಿದೆ. ಮಹಿಳೆಯೊಬ್ಬರು ಸಮರ್ಥ ಮುಂದಾಳತ್ವ ವಹಿಸಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದು ವಿಶೇಷ. ಕಿತ್ತೂರಿನ ಇತಿಹಾಸ ಕ್ರಿ.ಶ. 1586 ರಿಂದಲೇ ಆರಂಭವಾಗುತ್ತದೆ. ಆದರೇ ಇದು ಪ್ರಸಿದ್ಧಿ ಪಡೆದಿದ್ದು ಮಾತ್ರ ಬ್ರಿಟಿಷ್ ವಿರುದ್ಧದ ಹೋರಾಟದಿಂದ. ಮಲಸರ್ಜನ ದೇಸಾಯಿ ಪತ್ನಿಯಾಗಿ ರಾಣಿ ಚೆನ್ಮಮ್ಮ ಕಿತ್ತೂರು ಸಂಸ್ಥಾನಕ್ಕೆ ಬರುತ್ತಾರೆ. ಕೆಲವೇ ವರ್ಷಗಳಲ್ಲಿ ಮಲಸರ್ಜನ ದೇಸಾಯಿ ಪೇಶ್ವೆಗಳಿಂದ ಬಂಧನಕ್ಕೆ ಒಳಗಾಗಿ ಮೂರು ವರ್ಷ ಕಾರಾಗೃಹ ಶಿಕ್ಷೆ ಅನುಭವಿಸುತ್ತಾರೆ. ಪುಣೆಯಿಂದ ತಪ್ಪಿಸಿಕೊಂಡು ಬರುವ ಸಂದರ್ಭದಲ್ಲಿ ಮಲಸರ್ಜನ ದೇಸಾಯಿ ಅರಬಾವಿ ಬಳಿ ಮೃತಪಟ್ಟರು.
Laxmi News 24×7