ಬೆಳಗಾವಿ: ಅತ್ಯಾಚಾರ, ಗರ್ಭಪಾತ ಹಾಗೂ ದೈಹಿಕ ಹಲ್ಲೆ ಸೇರಿ 10ಕ್ಕೂ ಅಧಿಕ ಆರೋಪ ಪ್ರಕರಣಗಳನ್ನು ಎದುರಿಸುತ್ತಿರುವ ಇಲ್ಲಿನ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ್ ಟಾಕಳೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ. ಬೆಳಗಾವಿಯ 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಅನಂತ್ ಹೆಚ್ ಈ ಆದೇಶ ಹೊರಡಿಸಿದ್ದಾರೆ.
ರಾಜಕುಮಾರ್ ಟಾಕಳೆ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ರಾವ್ ದೂರಿನಡಿ ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಟಾಕಳೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಇದೀಗ ಅರ್ಜಿ ವಜಾಗೊಂಡಿದ್ದು, ಅಧಿಕಾರಿಗೆ ಸಂಕಷ್ಟ ಎದುರಾಗಿದೆ.
ದೂರು-ಪ್ರತಿದೂರು: ಕಳೆದ ಹಲವು ದಿನಗಳ ಹಿಂದೆ ಚನ್ನಪಟ್ಟಣ ಮೂಲದ ನವ್ಯಶ್ರೀ ರಾವ್ ವಿರುದ್ಧ ಜುಲೈ 18ರಂದು ರಾಜಕುಮಾರ್ ಟಾಕಳೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನಲ್ಲಿ ಸುಳ್ಳು ಅತ್ಯಾಚಾರ ಕೇಸ್ ದಾಖಲಿಸುವುದಾಗಿ ಬೆದರಿಕೆ, ಸುಲಿಗೆ ಬ್ಲ್ಯಾಕ್ಮೇಲ್ ಬಗ್ಗೆ ಉಲ್ಲೇಖಿಸಿದ್ದರು.