ಬೆಳಗಾವಿ: ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಅತೃಪ್ತ ಶಾಸಕರ ಜತೆ ಮುಂಬೈಗೆ ತೆರಳಿದ್ದೆ. ಅಲ್ಲಿಂದ ರಹಸ್ಯವಾಗಿ ಮಾಹಿತಿ ಕಳುಹಿಸಿದ್ದೆ ಎಂದು ಚನ್ನಪಟ್ಟಣದ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ರಾವ್ ಶನಿವಾರ ಹೇಳಿದ್ದಾರೆ.
ತೋಟಗಾರಿಕೆ ಇಲಾಖೆಯ ಖಾನಾಪುರದ ಸಸ್ಯ ಪಾಲನಾಲಯದ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ವಿರುದ್ಧ ದೂರು ನೀಡಲು ಬೆಳಗಾವಿಗೆ ಬಂದಿರುವ ಅವರು, ತಾವು ಯಾರನ್ನೂ ಹನಿಟ್ರ್ಯಾಪ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
‘ಕಾಂಗ್ರೆಸ್ಸಿನ ಅತೃಪ್ತ ಶಾಸಕರು ಮುಂಬೈಗೆ ಹೋಗಿದ್ದಾಗ ನಾನೂ ತೆರಳಿದ್ದೆ. ಅತೃಪ್ತರ ಬಗ್ಗೆ ಗುಪ್ತವಾಗಿ ಮಾಹಿತಿ ನೀಡುವಂತೆ ಪಕ್ಷದ ಹಿರಿಯ ರಾಜಕಾರಣಿಯೊಬ್ಬರು ನನ್ನನ್ನು ಕಳುಹಿಸಿದ್ದರು. ಆದರೆ, ಅಲ್ಲಿಗೆ ‘ಹನಿಟ್ರ್ಯಾಪ್’ ಮಾಡಲು ಹೋಗಿದ್ದೆ ಎಂದು ಕೆಲವರು ಅಪಪ್ರಚಾರ ಮಾಡಿದ್ದಾರೆ’ ಎಂದೂ ನವ್ಯಶ್ರೀ ಹೇಳಿದರು.
‘ಕಾಂಗ್ರೆಸ್ ಪ್ರಮುಖ ನಾಯಕರೇ ಮುಂಬೈಗೆ ಹೋಗಲು ಸೀಕ್ರೇಟ್ ಟಾಸ್ಕ್ ನೀಡಿದ್ದರು. ನನ್ನೊಂದಿಗೆ ಇನ್ನೂ ಮೂವರು ಮಹಿಳೆಯರಿದ್ದರು. ಅತೃಪ್ತ ಶಾಸಕರ ಚಲನವಲನ ನೋಡಿಕೊಳ್ಳುವ ಟಾಸ್ಕ್ ನಮ್ಮದಾಗಿತ್ತು. ನಮ್ಮ ನಾಯಕರಿಗೆ ವಾಟ್ಸ್ಆಯಪ್ ಮೂಲಕ ಮಾಹಿತಿ ಕೊಡುತ್ತಿದ್ದೆ. ಆ ಜವಾಬ್ದಾರಿಯನ್ನು ನಾನು ಯಶಸ್ವಿಯಾಗಿ ನಿಭಾಯಿಸಿದ್ದೇನೆ’ ಎಂದರು.