Breaking News

ಈಶ್ವರಪ್ಪಗೆ ಕ್ಲೀನ್‌ಚಿಟ್‌: ನ್ಯಾಯ ಸಿಗುವವರೆಗೆ ಹೋರಾಟ; ಸಂತೋಷ್‌ ಸಹೋದರ ಪ್ರಶಾಂತ

Spread the love

ಬೆಳಗಾವಿ: ‘ಸಂತೋಷ್‌ ಪಾಟೀಲ ಹಾಗೂ ಶಾಸಕ ಕೆ.ಎಸ್‌.ಈಶ್ವರಪ್ಪ ಅವರ ಸಹವರ್ತಿಗಳ ಮೊಬೈಲ್‌ ಸಂಭಾಷಣೆಯ ದಾಖಲೆಗಳನ್ನು ಪಡೆದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ. ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುತ್ತೇವೆ’ ಎಂದು ಸಂತೋಷ್‌ ಅವರ ಹಿರಿಯ ಸಹೋದರ ಪ್ರಶಾಂತ ಪಾಟೀಲ ತಿಳಿಸಿದರು.

 

ಗುತ್ತಿಗೆದಾರ ಸಂತೋಷ್‌ ಪಾಟೀಲ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪ ಹೊತ್ತಿದ್ದ ಶಾಸಕ ಕೆ.ಎಸ್‌.ಈಶ್ವರಪ್ಪ ಅವರಿಗೆ ಕ್ಲೀನ್‌ಚಿಟ್‌ ನೀಡಿದ ಹಿನ್ನೆಲೆಯಲ್ಲಿ, ಅವರು ಗುರುವಾರ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರು.

 

‘ಆರೋಪಿ ವಿರುದ್ಧ ‘ಬಿ’ ರಿಪೋರ್ಟ್‌ ಹಾಕುವ ಮುನ್ನ ತನಿಖಾಧಿಕಾರಿಗಳು ದೂರುದಾರರಿಗೆ ಮಾಹಿತಿ ನೀಡಬೇಕು. ಆದರೆ, ನಮಗೆ ಮಾಹಿತಿಯನ್ನೇ ನೀಡದೆ ‘ಬಿ’ ರಿಪೋರ್ಟ್‌ ಹಾಕಲು ಹೇಗೆ ಸಾಧ್ಯ? ಇದು ಯಾವ ರೀತಿಯ ತನಿಖೆ?’ ಎಂದೂ ಪ್ರಶ್ನಿಸಿದರು.

‘ಈ ಪ್ರಕರಣದಲ್ಲಿ ಈಶ್ವರಪ್ಪ ಅವರು ಎಷ್ಟು ಪ್ರಭಾವ ಬೀರಿದ್ದಾರೆ ಎಂಬುದು ಇಡೀ ರಾಜ್ಯಕ್ಕೆ ಗೊತ್ತಾಗಿದೆ. ನನ್ನ ತಮ್ಮನ ಮೊಬೈಲ್‌ನಲ್ಲಿ ಈಶ್ವರಪ್ಪ ಅವರ ಸಹಚರರು ಮಾತನಾಡಿದ ಎಲ್ಲ ಕಾಲ್‌ ರೆಕಾರ್ಡ್‌ಗಳಿವೆ. ಈ ಸಾವಿಗೆ ಈಶ್ವರಪ್ಪ ಅವರೇ ಕಾರಣ ಎಂದು ಸಾಬೀತು ಮಾಡಲು ಅವುಗಳಿಂದ ಸಾಧ್ಯವಿದೆ. ಆದರೆ, ಪೊಲೀಸರು ಈವರೆಗೂ ಆ ಮೊಬೈಲ್‌ ನಮಗೆ ಹಿಂದಿರುಗಿ ನೀಡಿಲ್ಲ’ ಎಂದರು.

‘ಸಂತೋಷ್‌ ಮರಣೋತ್ತರ ಪರೀಕ್ಷೆ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯೂ ಸೇರಿದಂತೆ ಈವರೆಗೆ ಯಾವುದೇ ಮಾಹಿತಿ ನಮಗೆ ಕೊಟ್ಟಿಲ್ಲ. ಹೆಜ್ಜೆಹೆಜ್ಜೆಗೂ ನಮ್ಮ ಕಣ್ಣು ತಪ್ಪಿಸಿ, ಈಶ್ವರಪ್ಪ ಅವರನ್ನು ಬಚಾವ್‌ ಮಾಡುವ ಕೆಲಸ ಮಾಡಿದ್ದಾರೆ’ ಎಂದೂ ಅವರು ದೂರಿದರು.

‘ಈಶ್ವರಪ್ಪ ಅವರ ಸಹಚರರು ಎಷ್ಟು ಕಿರುಕುಳ ನೀಡುತ್ತಿದ್ದಾರೆ ಎಂಬ ಬಗ್ಗೆ ಸಂತೋಷ ನನ್ನ ಮುಂದೆ ಸಾಕಷ್ಟು ಬಾರಿ ಹೇಳಿದ್ದ. ಅವನ ಮೊಬೈಲ್‌ನಲ್ಲಿ ಎಲ್ಲರ ಕರೆಗಳನ್ನೂ ರೆಕಾರ್ಡ್‌ ಮಾಡಿಕೊಂಡಿದ್ದ. ಆದರೆ, ಸಾಕ್ಷ್ಯ ಕೊರತೆ ಇದೆ ಎಂದು ಆರೋಪಿಗೆ ಕ್ಲೀನ್‌ಚಿಟ್‌ ನೀಡಿದ್ದು ಅಚ್ಚರಿ ತಂದಿದೆ’ ಎಂದರು.


Spread the love

About Laxminews 24x7

Check Also

ಡಿಸೆಂಬರ 31 ಒಳಗಾಗಿ ಬೆಳಗಾವಿ ಜಿಲ್ಲೆ ವಿಭಜಿಸಿ,.

Spread the love ಡಿಸೆಂಬರ 31 ಒಳಗಾಗಿ ಬೆಳಗಾವಿ ಜಿಲ್ಲೆ ವಿಭಜಿಸಿ,. ಚಿಕ್ಕೋಡಿ: ಆಡಳಿತಾತ್ಮಕ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಡಿಸೆಂಬ‌ರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ