ಕಲಬುರಗಿ: ಪ್ರತಿ ಪೊಲೀಸ್ ಠಾಣೆಯಲ್ಲಿ ಮೂರು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಎಸ್ಬಿ ಡ್ಯೂಟಿ ಮಾಡಿದ ಕಾನ್ಸ್ಟೆಬಲ್ಗಳನ್ನು ಒಂದು ವಾರದೊಳಗೆ ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡಬೇಕು ಎಂದು ಕಾನೂನು, ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ನಗರ ಪೊಲೀಸ್ ಕಮಿಷನರ್ ಅವರಿಗೆ ಸೂಚಿಸಿದರು.
ಕಾನೂನು, ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆದ ಬಳಿಕ ಮೊದಲ ಬಾರಿಗೆ ಸೋಮವಾರ ನಗರಕ್ಕೆ ಭೇಟಿ ನೀಡಿದ ಅವರು ಸಾರ್ವಜನಿಕರ ಅಹವಾಲು ಸ್ವೀಕಾರದ ವೇಳೆ ವ್ಯಕ್ತಿಯೊಬ್ಬರ ದೂರಿಗೆ ಸಂಬಂಧಿಸಿದಂತೆ ಈ ಆದೇಶ ನೀಡಿದರು.
ಕೆಲ ಠಾಣೆಗಳಲ್ಲಿ ಹಲವು ವರ್ಷಗಳಿಂದ ಕೆಲವರೇ ಎಸ್ಬಿ ಡ್ಯೂಟಿಯಲ್ಲಿ ಇರುವ ಬಗ್ಗೆ ದೂರುಗಳು ಬರುತ್ತಿವೆ. ಹಾಗಾಗಿ, ಮೂರು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಯಾರನ್ನೇ ಆಗಲಿ ಮುಂದುವರೆಸಬೇಡಿ ಎಂದು ತಾಕೀತು ಮಾಡಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಡ್ಡೂರು ಶ್ರೀನಿವಾಸಲು, ಈಗಾಗಲೇ ವಿವಿಧ ಠಾಣೆಗಳ ಆರು ಜನ ಎಸ್ಬಿ ಡ್ಯೂಟಿ ಮಾಡುವ ಕಾನ್ಸ್ಟೆಬಲ್ಗಳನ್ನು ಬೇರೆಡೆ ನಿಯೋಜಿಸಲಾಗಿದೆ. ಉಳಿದವರ ವಿವರಗಳನ್ನೂ ತರಿಸಿಕೊಂಡು ಬೇರೆಡೆ ನಿಯೋಜನೆ ಮಾಡುತ್ತೇವೆ ಎಂದು ಅವರು ಹೇಳಿದರು.
ತುರ್ತು ಸಂದರ್ಭ ಇದ್ದಾಗಲೂ ಆಯಾ ಪೊಲೀಸ್ ಠಾಣೆಯವರನ್ನು ಕಳಹಿಸುವ ಬದಲು 112 ತುರ್ತು ಸ್ಪಂದನ ಪಡೆಗೆ ಕರೆ ಮಾಡುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ. ಇದು ಸರಿಯಾದ
ಕ್ರಮವೇ ಎಂದು ವ್ಯಕ್ತಿಯೊಬ್ಬರು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಶ್ರೀನಿವಾಸಲು, ಬೆಳಿಗ್ಗೆಯಿಂದ ಸಂಜೆಯವರೆಗೆ ಅಧಿಕಾರಿಗಳು ಕೆಲಸ ಮಾಡಿರುತ್ತಾರೆ. ರಾತ್ರಿ ವೇಳೆ ಘಟನೆ ನಡೆದಾಗ ಮಾತ್ರ 112ಕ್ಕೆ ಕರೆ ಮಾಡುವಂತೆ ತಿಳಿಸಿದ್ದೇನೆ. 112 ವಾಹನದಲ್ಲಿ ಸಿಬ್ಬಂದಿ ಸದಾ ಸನ್ನದ್ಧರಾಗಿ
ರುತ್ತಾರೆ. ಠಾಣೆಯವರು ಮನೆಯಿಂದ ಹೊರಡಬೇಕು ಎಂದರೆ ತಡವಾಗಬಹುದು ಎಂಬ ಉದ್ದೇಶದಿಂದ ಹೀಗೆ ಹೇಳಿದ್ದಾಗಿ ತಿಳಿಸಿದರು.
ದಲಿತ ಸೇನೆ ಅಧ್ಯಕ್ಷ ಹಣಮಂತ ಯಳಸಂಗಿ ಮಾತನಾಡಿ, ‘ಕಮಿಷನರೇಟ್ ವ್ಯಾಪ್ತಿಯಲ್ಲಿ ಮೂರು ಗುಟ್ಕಾ ಕಾರ್ಖಾನೆಗಳಿದ್ದು, ಅವುಗಳನ್ನು ಬಂದ್ ಮಾಡಿಸಲು ಕ್ರಮ ಕೈಗೊಳ್ಳಬೇಕು. ಈಗಲೇ ಬರುವುದಾದರೆ ಅವುಗಳನ್ನು ತೋರಿಸುತ್ತೇನೆ’ ಎಂದರು.