ಹೊಸಪೇಟೆ (ವಿಜಯನಗರ): ‘ನಾನೀಗ ರಾಜೀನಾಮೆ ಕೊಡಬೇಕಾ?’ – ಹೀಗೆಂದು ಸುದ್ದಿಗಾರರಿಗೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಪ್ರಶ್ನಿಸಿದರು.
ಅಂಜನಾದ್ರಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಬುಧವಾರ ನಗರದಲ್ಲಿ ಏರ್ಪಡಿಸಿದ್ದ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಮೇಲಿನಂತೆ ಪ್ರಶ್ನಿಸಿದರು.
‘ಟೆಂಡರ್ ಇಲ್ಲದೆಯೇ ₹6 ಕೋಟಿಯಲ್ಲಿ ನಗರದಲ್ಲಿ ಧ್ವಜ ಸ್ತಂಭ ನಿರ್ಮಿಸಲಾಗುತ್ತಿದೆ ಎಂಬ ವಿಷಯವನ್ನು ಪಿಡಬ್ಲ್ಯೂಡಿ ಅಧಿಕಾರಿಗಳೇ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದು ಸರಿಯಾದ ಕ್ರಮವೇ? ಬೆಳಗಾವಿಯಲ್ಲಿ ಟೆಂಡರ್ ಇಲ್ಲದೇ ಕಾಮಗಾರಿ ಕೈಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಕೆ.ಎಸ್. ಈಶ್ವರಪ್ಪನವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯಿತು. ಹೀಗಿದ್ದರೂ ಅದರಿಂದ ಪಾಠ ಕಲಿತಿಲ್ಲವೇಕೇ?’ ಎಂದು ಸುದ್ದಿಗಾರರು ಪ್ರಶ್ನಿಸಿದ್ದಕ್ಕೆ ತಾಳ್ಮೆ ಕಳೆದುಕೊಂಡು ಮೇಲಿನಂತೆ ಹೇಳಿದರು.
‘ಇದರ ಬಗ್ಗೆ ವಿವಾದ ಜನ ಮಾಡುತ್ತಿಲ್ಲ, ನೀವೇ ಮಾಡಿದ್ದು. ಅದರ ಬಗ್ಗೆ ನನಗೆ ಏನೂ ಗೊತ್ತೇ ಇಲ್ಲ. ಬೇಕಿದ್ದರೆ ನೀವು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಹಾಕಿ ಮಾಹಿತಿ ಪಡೆಯಬಹುದು. ಇನ್ನು, ಹೊಸಪೇಟೆ ಅಭಿವೃದ್ಧಿ ಆಗುತ್ತಿಲ್ಲ ಎನ್ನುವ ಆರೋಪ ಸರಿಯಿಲ್ಲ. ಬೇಕಿದ್ದರೆ ನೀವು ಕನ್ನಡಕ ಹಾಕಿಕೊಂಡು ನೋಡಬಹುದು’ ಎಂದು ಹೇಳಿದರು.
’75ನೇ ಸ್ವಾತಂತ್ರ್ಯ ಮಹೋತ್ಸವದ ಸಂಭ್ರಮದಲ್ಲಿ ದೇಶವಿದೆ. ವಿಜಯನಗರದ ನೆಲ ಇತಿಹಾಸ ಸೃಷ್ಟಿ ಮಾಡಲು ಇರುವಂತಹದ್ದು. 405 ಅಡಿ ಎತ್ತರದ ಧ್ವಜ ಸ್ತಂಭ ಪಾಕಿಸ್ತಾನದಲ್ಲೂ ಇಲ್ಲ. ಅಂತಹ ಧ್ವಜ ಸ್ತಂಭ ಇಲ್ಲಿ ನಿರ್ಮಾಣವಾಗುತ್ತಿದೆ. ಅದರಿಂದ ಆಕರ್ಷಣೆ, ಜನರಲ್ಲಿ ದೇಶಭಕ್ತಿ ಹೆಚ್ಚಾಗುತ್ತದೆ’ ಎಂದು ತಿಳಿಸಿದರು.