ಬೆಳಗಾವಿ :ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಾಣ ಮಾಡುತ್ತಿರುವ ಅಪೂರ್ವ ಗುತ್ತಿಗೆದಾರರ ಮೇಲೆ ಕ್ರಮ ಹಾಗೂ ಸ್ಮಾರ್ಟ್ ಸಿಟಿಯ ಭ್ರಷ್ಟಾಚಾರದ ವಿರುದ್ಧ ಆಮ್ ಆದ್ಮಿ ಪಾರ್ಟಿ ಬುಧವಾರ ಸ್ಮಾರ್ಟ್ ಸಿಟಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಅರ್ಹತೆ ಇಲ್ಲದವರಿಗೆ ನೇಮಕ ಮಾಡಿದ್ದಾರೆ. ವಿದ್ಯಾ ಅರ್ಹತೆ ಇಲ್ಲದವರನ್ನು ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ ನಲ್ಲಿ ನೇಮಕ ಮಾಡಿದ್ದಾರೆ. ಅಲ್ಲದೆ, ಅರ್ಹತೆ ಇರುವ ನಿಷ್ಠಾವಂತರಿಗೆ ಕಡೆಗಣಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಮಾರ್ಟ್ ಸಿಟಿಯಿಂದ ಕೈಗೊಳ್ಳಲಾದ ರಸ್ತೆ ಕಾಮಗಾರಿ ಕಳಪೆಯಾಗಿವೆ.ಸ್ಮಾರ್ಟ್ ಸಿಟಿ ಯೋಜನೆಯ ಸಿಬಿಟಿ ಬಸ್ ನಿಲ್ದಾಣದ ಕಾಮಗಾರಿಯಲ್ಲಿ ಗುತ್ತಿಗೆ ಪಡೆದಿರುವ ಅಪೂರ್ವಾ ಗುತ್ತಿಗೆದಾರ ಕಲಾಮಂದಿರದ ಕಾಮಗಾರಿಗೆ ಸ್ಮಾರ್ಟ್ ಸಿಟಿಯಿಂದ ಕರೆಯಲಾದ ಟೆಂಡರ್ ನಲ್ಲಿ ನಕಲಿ ದಾಖಲಾತಿ ನೀಡಿದರೂ ಇಲ್ಲಿಯವರೆಗೆ ಅವರ ಮೇಲೆ ಕ್ರಮ ಕೈಗೊಂಡಿಲ್ಲ. ಅಪೂರ್ವಾ ಗುತ್ತಿಗೆದಾರನ ಮೇಲೆ ಕೆಯುಎಫ್ ಡಿಐಸಿ ಕ್ರಮ ಕೈಗೊಳ್ಳಬೇಕೆಂದು ಸ್ಮಾಟ್೯ ಸಿಟಿ ಅಧಿಕಾರಿಗಳಿಗೆ ಪತ್ರ ಬರೆದರೂ ಇಲ್ಲಿಯವರೆಗೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಸ್ಮಾರ್ಟ್ ಸಿಟಿ ಯೋಜನೆಯ ಸಿಬಿಟಿ ಬಸ್ ನಿಲ್ದಾಣದ ಕಾಮಗಾರಿಯಲ್ಲಿ 17 ಪ್ರತಿಶತ ಹೆಚ್ಚಿಗೆ ಕಾಮಗಾರಿ ನೀಡಿದ್ದು ಯಾವ ರಾಜಕಾರಣಿ ಮಾತು ಕೇಳಿ ನೀಡಿದ್ದಾರೆ ಎಂದು ಒತ್ತಾಯಿಸಿದರು.
ಸಿಬಿಟಿ ಬಸ್ ನಿಲ್ದಾಣದ ಕಾಮಗಾರಿಯಲ್ಲಿ 17 ಪ್ರತಿಶತ ಕಾಮಗಾರಿ ಹೆಚ್ಚಳ ಮಾಡಿ ಹಣ ಕೊಳ್ಳೆ ಹೊಡೆಯುವ ಲೆಕ್ಕಾಚಾರದಲ್ಲಿ ಸ್ಥಳೀಯ ಶಾಸಕರು, ಸ್ಮಾರ್ಟ್ ಸಿಟಿ ಅಧಿಕಾರಿಗಳು ಇದ್ದಾರೆ. ಇವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸ್ಮಾರ್ಟ್ ಸಿಟಿ ಲಿಮಿಟೆಡ್ ದಲ್ಲಿ ಭ್ರಷ್ಟ ಅಧಿಕಾರಿ ಹಾಗೂ ಪಿಎಂಸಿ ಕಂಪನಿ ಮಾಡಿರುವ ಭ್ರಷ್ಟಾಚಾರ ಎಲ್ಲರಿಗೂ ತಿಳಿದಿದೆ.
600 ಕೋಟಿ ರೂ. ರಸ್ತೆ ಹಾಗೂ ಒಳಚರಂಡಿ ನಿರ್ಮಾಣ ಮಾಡಿದ್ದಾರೆ. ಅದು ಕಳಪೆಯಾಗಿವೆ. ಅಲ್ಲದೆ ಪೇವರ್ಸ್ ಕಾಮಗಾರಿ ಮಾಡಿರುವುದು ಕಿತ್ತು ಹೊರ ಬರುತ್ತಿವೆ ಎಂದು ದೂರಿದರು.
ಸ್ಮಾರ್ಟ್ ಸಿಟಿ ಅಧಿಕಾರಿಗಳು ಅಪೂರ್ವ ಗುತ್ತಿಗೆದಾರರ ಮೇಲೆ ಒಂದು ವಾರದ ಒಳಗಾಗಿ ಕ್ರಮ ಕೈಗೊಳ್ಳದಿದ್ದರೇ ಸ್ಮಾರ್ಟ್ ಸಿಟಿ ಕಚೇರಿ ಎದುರು ನಿರಂತರ ಧರಣಿ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.
ಆಮ್ ಆದ್ಮಿ ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ, ಆಪ್ ಮುಖಂಡ ಶಂಕರ ಹೆಗಡೆ, ಶಿವಾನಂದ ಕಾರಿ, ಪಾಶಾ ಸೈಯದ್,ಗಂಗಾಧರ ಹುಬ್ಬೇಳಪ್ಪನವರ, ಎಂ.ಕೆ.ಸೈಯದ್, ಸಮೀರ, ನಿಹಾಲ್, ಜುನೇದ್, ಕ್ಯಾ. ಗಿರೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.