ಚೆನ್ನೈ(ತಮಿಳುನಾಡು): ಟೀಂ ಇಂಡಿಯಾ ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಂಡು ಈಗಾಗಲೇ ಕೃಷಿ ಕ್ಷೇತ್ರದ ಮೇಲೆ ಹೆಚ್ಚಿನ ಒಲವು ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ.
ಆಧುನಿಕ ಶೈಲಿಯಲ್ಲಿ ರೈತರಿಗೆ ಸಹಾಯ ಮಾಡಲು ಮುಂದಾಗಿರುವ ಅವರು, ಮಹತ್ವದ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಇಂಡಿಯನ್ ಗರುಡ ಡ್ರೋನ್ ಕಂಪನಿಯಲ್ಲಿ ಶೇರ್ ಖರೀದಿಸಿರುವ ಮಾಹಿ, ರೈತರಿಗೆ ನೆರವಾಗಲು ನಿರ್ಧಾರ ಕೈಗೊಂಡಿದ್ದಾರೆ.
ಗರುಡ ಕಂಪನಿಯ ಡ್ರೋನ್ಗಳು ರೈತರಿಗೆ ಸಹಕಾರಿಯಾಗಿದ್ದು, ಅವುಗಳ ಸಹಾಯದಿಂದ ಕೀಟನಾಶಕ, ಕಳೆನಾಶಕ, ನೀರು, ರಸಗೊಬ್ಬರವನ್ನ ಸುಲಭವಾಗಿ ಬೆಳೆಗಳಿಗೆ ಹಾಕಬಹುದಾಗಿದೆ. ಕಡಿಮೆ ಸಮಯದಲ್ಲಿ ಹೆಚ್ಚಿನ ಜಮೀನಿಗೆ ರಸಗೊಬ್ಬರ, ಕೀಟನಾಶಕ ಸಿಂಪಡಣೆ ಮಾಡಲು ಈ ಡ್ರೋನ್ಗಳು ಸಹಕಾರಿಯಾಗಿದ್ದು, ಧೋನಿ ಇದೀಗ ಶೇರ್ ಹೋಲ್ಡರ್ ಆಗಿದ್ದಾರೆ.
ಗರುಡ ಏರೋಸ್ಪೇಸ್ನ ಷೇರುದಾರರ ಜೊತೆ ಬ್ರಾಂಡ್ ಅಂಬಾಸಿಡರ್ ಆಗಿರುವ ಧೋನಿ, ರೈತರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಗರುಡ ಕಂಪನಿಯಲ್ಲಿ ಧೋನಿ ಎಷ್ಟೊಂದು ಹಣ ಹೂಡಿಕೆ ಮಾಡಿದ್ದಾರೆಂಬುದರ ಬಗ್ಗೆ ಯಾವುದೇ ರೀತಿಯ ವಿವರವಾದ ಮಾಹಿತಿ ಲಭ್ಯವಾಗಿಲ್ಲ. ಆದರೆ, ಗರುಡ ಎರೋಸ್ಪೇಸ್ನ ಭಾಗವಾಗಲು ನನಗೆ ಸಂತೋಷವಾಗುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆಂದು ಕಂಪನಿ ಪ್ರಕಟಣೆ ಹೊರಡಿಸಿದೆ. ಗರುಡ ಕಂಪನಿಯ 300 ಡ್ರೋನ್ಗಳು ಈಗಾಗಲೇ 26 ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕಾಗಿ 500 ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ.