ಕುಷ್ಟಗಿ (ಕೊಪ್ಪಳ): ಅಪ್ಪನ ಅಕಾಲಿಕ ಸಾವಿನಿಂದಾಗಿ ಹೆಗಲೇರಿದ 29 ಅಡಿ ಎತ್ತರದ ತೇರು ನಿರ್ಮಾಣ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರೈಸಿದ ಸೋದರರಿಬ್ಬರ ಸಾಧನೆಯ ಕತೆ ಇದು. ಈ ಇಬ್ಬರೂ ಅಂಧರಾದರೂ, ಕೇವಲ ಸ್ಪರ್ಶಜ್ಞಾನದಿಂದಲೇ ಕಟ್ಟಿಗೆಯಲ್ಲಿ ವಿವಿಧ ಚಿತ್ತಾರ ಬಿಡಿಸುವಲ್ಲಿ ಪರಿಣತಿ ಸಾಧಿಸಿರುವುದು ವಿಶೇಷ.
ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ಬೇಲೂರಿನ ಸುರೇಶ ಮತ್ತು ಮಹೇಶ ಬಡಿಗೇರ ಅವರೇ ಈ ಸಾಹಸಿಗರು. ಇವರ ತಂದೆ ಮಲ್ಲಪ್ಪ ಬಿಡಗೇರ ರಾಜ್ಯ ಪ್ರಶಸ್ತಿ ಪುರಸ್ಕೃತ ರಥಶಿಲ್ಪಿ. ಇವರ ಕಲೆಯ ಅರಿವಿದ್ದ ಪಟ್ಟಲಚಿಂತಿ ಗ್ರಾಮಸ್ಥರು ತಮ್ಮೂರಿನ ಮಾರುತೇಶ್ವರ ದೇವಸ್ಥಾನಕ್ಕೆ ತೇರು ನಿರ್ವಿುಸಿಕೊಡುವಂತೆ ಕೇಳಿಕೊಂಡಿದ್ದರು. ಈ ಸಂಬಂಧ ಒಪ್ಪಂದವೂ ಆಗಿತ್ತು. ಆದರೆ ಒಪ್ಪಂದವಾದ ಕೆಲವೇ ದಿನಗಳಲ್ಲಿ ರಥಶಿಲ್ಪಿ ನಿಧನರಾದರು. 2018ರಲ್ಲಿ ಒಪ್ಪಂದ ಏರ್ಪಟ್ಟ ಬಳಿಕ ಒಂದು ವರ್ಷದಲ್ಲಿ ಮಕ್ಕಳು ತೇರು ನಿರ್ವಿುಸಿಕೊಟ್ಟಿದ್ದಾರೆ. ಈ ತೇರನ್ನು ಏ.16ರ ಜಾತ್ರಾ ಮಹೋತ್ಸವದಲ್ಲಿ ಕೊಪ್ಪಳದ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಿದರು.