ಬೆಂಗಳೂರು: ಬ್ಯಾಡರಹಳ್ಳಿ ಠಾಣೆಯ ವ್ಯಾಪ್ತಿಯಲ್ಲಿ ಫೈನಾನ್ಸಿಯರ್ ಉಮೇಶ್ (52) ಕೊಲೆ ನಡೆದಿದ್ದು, ಈ ಸಂಬಂಧ ಪತ್ನಿ ವರಲಕ್ಷ್ಮಿ (48) ಅವರನ್ನು ಪೊಲೀಸರು ಬಂಧಿಸಿದ್ದಾರೆ.
‘ಅಂದ್ರಹಳ್ಳಿಯ ಸಾಯಿಬಾಬಾ ನಗರದ ನಿವಾಸಿ ಉಮೇಶ್, ರಿಯಲ್ ಎಸ್ಟೇಟ್ ಏಜೆಂಟ್ ಹಾಗೂ ಫೈನಾನ್ಸಿಯರ್ ಆಗಿದ್ದರು.
ಸೋಮವಾರ ನಸುಕಿನಲ್ಲಿ ನಡೆದಿರುವ ಅವರ ಕೊಲೆ ಬಗ್ಗೆ ತಮ್ಮ ಜೆ.ಎಂ. ಸತೀಶ್ ದೂರು ನೀಡಿದ್ದಾರೆ. ಆರೋಪಿಯಾದ ಪತ್ನಿ ವರಲಕ್ಷ್ಮಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
ದಂಪತಿ ನಡುವೆ ಜಗಳ: ‘ಉಮೇಶ್ ಅವರು ಸಂಬಂಧಿಯೂ ಆಗಿದ್ದ ವರಲಕ್ಷ್ಮಿಯನ್ನು 28 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ’ ಎಂದು ಪೊಲೀಸರು ತಿಳಿಸಿದರು.
‘ಪ್ರಕಾಶನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದ ಕುಟುಂಬ, ಕೆಲ ತಿಂಗಳ ಹಿಂದಷ್ಟೇ ಅಂದ್ರಹಳ್ಳಿಯ ಸಾಯಿಬಾಬಾ ನಗರದಲ್ಲಿ ನಿರ್ಮಿಸಿದ್ದ ಸ್ವಂತ ಮನೆಗೆ ಸ್ಥಳಾಂತರವಾಗಿತ್ತು. ಮನೆ ನಿರ್ವಹಣೆ ಹಾಗೂ ಇತರೆ ವಿಚಾರಕ್ಕಾಗಿ ದಂಪತಿ ನಡುವೆ ನಿತ್ಯವೂ ಜಗಳವಾಗುತ್ತಿತ್ತು ಎಂಬುದು ತನಿಖೆಯಿಂದ ಗೊತ್ತಾಗಿದೆ.’
‘ಭಾನುವಾರ ತಡರಾತ್ರಿಯೂ ದಂಪತಿ ನಡುವೆ ಜಗಳ ಆಗಿತ್ತು. ಉಮೇಶ್ ಅವರು ವರಲಕ್ಷ್ಮಿಗೆ ಒದ್ದಿದ್ದರು. ಮಕ್ಕಳು ಜಗಳ ಬಿಡಿಸಿದ್ದರಿಂದ ದಂಪತಿ ಪ್ರತ್ಯೇಕ ಕೊಠಡಿಯಲ್ಲಿ ಮಲಗಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.