ಬೆಳಗಾವಿ: ರಣಕುಂಡೆಯೆ ಗ್ರಾಮದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಹಂತಕರನ್ನು ಪೊಲೀಸರ ಬಂಧಿಸಿದ್ದಾರೆ.
ಬೆಳಗಾವಿ ತಾಲೂಕಿನ ರಣಕುಂಡೆಯೆ ಗ್ರಾಮದ ನಿವಾಸಿ ನಾಗೇಶ್ ಪಾಟೀಲ್(31)ನನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಪರಿಣಾಮ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ತನಿಖೆ ಪ್ರಾರಂಭಿಸಲಾಗಿತ್ತು. ಈ ಹಿನ್ನೆಲೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಇಬ್ಬರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಅವರನ್ನು ಆದಷ್ಟು ಬೇಗ ಬಂಧನ ಮಾಡಲಾಗುತ್ತದೆ ಎಂದು ಕಮಿಷನರ್ ಡಾ.ಬೋರಲಿಂಗಯ್ಯ ಹೇಳಿದ್ದಾರೆ.
ಪ್ರಕರಣ ಹಿನ್ನೆಲೆ: ಬೆಳಗಾವಿ ತಾಲೂಕಿನ ರಣಕುಂಡೆಯೆ ಗ್ರಾಮದ ನಿವಾಸಿ ನಾಗೇಶ್ ಪಾಟೀಲ್ ಮನೆಯಲ್ಲಿಯೇ ಮಲಗಿಕೊಂಡಿದ್ದ. ಆದರೆ ಆತನನ್ನು ಬಲವಂತವಾಗಿ ಹೊರಗಡೆ ಕರೆದುಕೊಂಡು ಹೋಗಿ ಭೀಕರವಾಗಿ ಹಲ್ಲೆಮಾಡಿ ಮನೆಯ ಮುಂದೆ ಬಿಸಾಡಿ ಹೋಗಿದ್ರು. ಇದಲ್ಲದೇ ನಾಗೇಶ್ ರಕ್ಷಣೆಗೆ ಮುಂದಾದ ಆತನ ಸಹೋದರ ಮನೋಜ್ ಪಾಟೀಲ್ ಮೇಲೂ ಆರೋಪಿಗಳು ಹಲ್ಲೆ ಮಾಡಿದ್ದಾರೆ.
ಮಾರಣಾಂತಿಕ ಹಲ್ಲೆಯಿಂದ ನಾಗೇಶ್ ಪಾಟೀಲ್ ಸಾವನ್ನಪ್ಪಿದ್ದನು. ಇತ್ತ ಗಂಭೀರ ಗಾಯಗೊಂಡ ಮನೋಜ್ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.