ಚಿಕ್ಕಮಗಳೂರು: ಮಲೆನಾಡಿನ ನಕ್ಸಲ್ ಚಳವಳಿಯಲ್ಲಿ ಸಕ್ರಿಯವಾಗಿದ್ದು, ಸುಮಾರು 1 ದಶಕದಿಂದ ಭೂಗತರಾಗಿ ಇತ್ತೀಚೆಗೆ ಕೇರಳದಲ್ಲಿ ಬಂಧಿತರಾಗಿರುವ ಸಾವಿತ್ರಿ(37) ಅವರನ್ನು ಶುಕ್ರವಾರ ಶೃಂಗೇರಿಯ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಶುಕ್ರವಾರ ಬೆಳಗ್ಗೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಸಾವಿತ್ರಿ ಅವರನ್ನು ಶೃಂಗೇರಿ ಪಟ್ಟಣದ ನ್ಯಾಯಾಲಯದ ಆವರಣಕ್ಕೆ ಕರೆ ತಂದ ಪೊಲೀಸರು ಕೆಲ ಹೊತ್ತಿನ ಬಳಿಕ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಸಚಿನ್ ಅವರ ಮುಂದೆ ಹಾಜರುಪಡಿಸಿದರು.
ವಿಚಾರಣೆ ಬಳಿಕ ನ್ಯಾಯಾಧೀಶರು ಆರೋಪಿ ಸಾವಿತ್ರಿ ಅವರನ್ನು ಎ.8ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆಂದು ತಿಳಿದು ಬಂದಿದೆ.
ಸಾವಿತ್ರಿ ಅವರು ಕಳಸ ಪಟ್ಟಣ ಸಮೀಪದ ಝರಿಮನೆ ಗ್ರಾಮದ ನಿವಾಸಿಯಾಗಿದ್ದು, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಹೋರಾಟದ ಸಂದರ್ಭದಲ್ಲಿ ಮಲೆನಾಡಿನಲ್ಲಿ ನಡೆದ ಅನೇಕ ಜನಪರ, ಆದಿವಾಸಿ, ಅರಣ್ಯ ಚಳವಳಿಗಳಲ್ಲಿ ಸಕ್ರೀಯರಾಗಿದ್ದರು. ಆ ಬಳಿಕ ನಕ್ಸಲ್ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ಅವರು ಆ ಬಳಿಕ ಭೂಗತರಾಗಿದ್ದರು. ಇತ್ತೀಚೆಗೆ ಕೇರಳದ ಸುಲ್ತಾನ್ ಭತ್ತೇರಿಯಲ್ಲಿ ಪೊಲೀಸರಿಂದ ಬಂಧನಕ್ಕೊಳಗಾದ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿಯೊಂದಿಗೆ ಸಾವಿತ್ರಿ ಅವರನ್ನೂ ಪೊಲೀಸರು ಬಂಧಿಸಿದ್ದರು.