ಕಲಬುರಗಿ: ರಸ್ತೆ ದಾಟುತ್ತಿದ್ದ ಬಾಲಕನಿಗೆ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದು ಆತನ ದೇಹ ರಸ್ತೆಯಲ್ಲೇ ಛಿದ್ರಗೊಂಡಿದ್ದು, ಉದ್ರಿಕ್ತ ಜನರು ಟಿಪ್ಪರ್ಗೆ ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲಬುರಗಿ ನಗರದ ಹೀರಾಪುರ ಬಡಾವಣೆಯ ಫ್ಲೈಓವರ್ ಬಳಿ ಈ ಅವಘಡ ಸಂಭವಿಸಿದೆ.
ಮನೀಷ್ ಮಲ್ಲಿಕಾರ್ಜುನ (10) ಸಾವಿಗೀಡಾದ ಬಾಲಕ. ಈತ ಇಂದು ಪಾಲಕರ ಜತೆ ರಸ್ತೆ ದಾಟುತ್ತಿದ್ದಾಗ ಮುಂದೆ ಓಡಿದ್ದ. ಅದೇ ಸಮಯಕ್ಕೆ ಮೇಲ್ಸೇತುವೆಯಿಂದ ವೇಗವಾಗಿ ಬರುತ್ತಿದ್ದು ಟಿಪ್ಪರ್ ಡಿಕ್ಕಿ ಹೊಡೆದಿದ್ದು, ಬಾಲಕನ ದೇಹ ಛಿದ್ರಗೊಂಡು ಸ್ಥಳದಲ್ಲೇ ಸಾವಿಗೀಡಾಗಿದ.
ಬಾಲಕ ಸಾವಿಗೀಡಾದ್ದನ್ನು ಕಂಡು ರೊಚ್ಚಿಗೆದ್ದ ಜನರು ಟಿಪ್ಪರ್ಗೆ ಬೆಂಕಿ ಇಟ್ಟಿದ್ದು, ಅದು ಹೊತ್ತಿ ಉರಿದಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ಆರಿಸುವ ಕಾರ್ಯಾಚರಣೆ ನಡೆಸುತ್ತಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಪೊಲೀಸ್ ಭದ್ರತೆ ಒದಗಿಸಲಾಗಿದೆ.