ಪಡಿತರ ವಿತರಣೆಯಲ್ಲಿ ಲೋಪ ಎಸಗಿರುವ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕಿನ ಅಲಾರವಾಡ ಗ್ರಾಮದಲ್ಲಿರುವ ನ್ಯಾಯ ಬೆಲೆ ಅಂಗಡಿಯನ್ನು ರದ್ದು ಪಡಿಸಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ಆದೇಶ ಹೊರಡಿಸಿದ್ದಾರೆ.
ಹೌದು ಅಲಾರವಾಡ ಗ್ರಾಮದ ವಿಲೇಜ್ ಕಮೀಟಿ ಅಲಾರವಾಡ ಹೆಸರಿನ ನ್ಯಾಯ ಬೆಲೆ ಅಂಗಡಿ ಮೇಲೆ ಗ್ರಾಹಕರು ಸಾಕಷ್ಟು ದೂರು ಕೇಳಿ ಬಂದಿದ್ದವು. ಈ ಬಗ್ಗೆ ವಿಚಾರಣೆ ನಡೆಸಿದ್ದ ಆಹಾರ ಇಲಾಖೆ ಅಧಿಕಾರಿಗಳು ಪಡಿತರ ವಿತರಣೆಯಲ್ಲಿ ಲೋಪ ಎಸಗಿರುವುದು ಹಾಗೂ ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ ಆದೇಶ ಷರತ್ತನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಹೀಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ ವಿಲೇಜ್ ಕಮೀಟಿ ಅಲಾರವಾಡ ನ್ಯಾಯ ಬೆಲೆ ಅಂಗಡಿಯನ್ನು ರದ್ದು ಮಾಡಿ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಭದ್ರತಾ ಠೇವಣಿ ಮೊತ್ತ ಸರ್ಕಾರಕ್ಕೆ ಮುಟ್ಟಗೋಲು ಹಾಕಿಕೊಳ್ಳಲಾಗಿದೆ. ಇನ್ನು ಅಲಾರವಾಡ ಗ್ರಾಮದಲ್ಲಿ ಪಡಿತರ ವಿತರಣೆಯನ್ನು ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಮೂಲಕ ವಿತರಣೆ ಮಾಡಲು ನಿರ್ಧರಿಸಲಾಗಿದೆ.