ಬೆಂಗಳೂರು: ದೇಶದಲ್ಲಿ ಪ್ರತಿಯೊಬ್ಬರಿಗೂ ತಾವು ಶಾಲೆಗೆ ಹೋಗಬೇಕೋ ಬಿಡಬೇಕೋ ಅನ್ನೋ ನಿರ್ಣಯ ತೆಗೆದುಕೊಳ್ಳುವ ಹಕ್ಕು ಕೊಡಲಾಗಿದೆ. ನಮ್ಮ ರಾಜ್ಯದ ಆರ್ ಟಿಇ ಪ್ರಕಾರ 8ನೇ ತರಗತಿ ತನಕ ಶಿಕ್ಷಣ ಕಡ್ಡಾಯವನ್ನಾಗಿ ಮಾಡಿದ್ದೇವೆ. ಅದರ ಮೇಲಿನ ಮಕ್ಕಳು ಶಾಲೆಗೆ ಬರಲೇಬೇಕು ಅಂತೇನೂ ಇಲ್ಲ. ಆದರೆ ಹೊಸ ಆರ್ಟಿಇ ಅಡಿಯಲ್ಲಿ 12ನೇ ತರಗತಿ ತನಕ ಮಕ್ಕಳು ಶಾಲೆಗೆ ಬರಲೇಬೇಕು ಎಂಬ ನಿಯಮವನ್ನ ತರಬೇಕೆಂಬ ಯೋಚನೆ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.
8ನೇ ತರಗತಿ ನಂತರದ ಮಕ್ಕಳಿಗೂ ಕಡ್ಡಾಯ ಶಿಕ್ಷಣ ಮಾಡುವ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ ಎಂದರು. ನಿನ್ನೆ ಹೈಕೋರ್ಟ್ನಲ್ಲಿ ಹಿಜಾಬ್ ವಿಚಾರವಾಗಿ ತೀರ್ಪು ಬಂದಿದ್ದು, ಆ ತೀರ್ಪನ್ನು ನಾವು ಒಪ್ಪಲ್ಲ, ಶಾಲಾ-ಕಾಲೇಜಿಗೆ ಬರೋದಿಲ್ಲ. ಹಿಜಾಬ್ ಧರಿಸಿಯೇ ಬರುವುದಾಗಿ ಕೆಲವು ವಿದ್ಯಾರ್ಥಿನಿಯರು ಹೇಳಿಕೆ ನೀಡಿದ್ದಾರೆ. ಈ ವಿಚಾರವಾಗಿ ಮಾತಾನಡಿದ ಸಚಿವರು, ವಿದ್ಯಾರ್ಥಿಗಳ ಹಕ್ಕುಗಳನ್ನ ಕಿತ್ತುಕೊಳ್ಳಲು ಹೋಗಲ್ಲ. ಆದರೆ ನಮ್ಮಲ್ಲಿ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರ್ ವಾಜಪೇಯಿ ಸರ್ವ ಶಿಕ್ಷಣ ಅಭಿಯಾನ ಶುರು ಮಾಡಿ ಎಲ್ಲರಿಗೂ ಶಿಕ್ಷಣ ಕೊಡಬೇಕೆಂಬ ಆಸೆಯನ್ನ ಹೊಂದಿದ್ದರು. ಹಾಗೆ ನರೇಂದ್ರ ಮೋದಿಯವರು ಬೇಟಿ ಬಚಾವೊ, ಬೇಟಿ ಪಡಾವೊ ಆಂದೋಲನ ಮಾಡಿ ಮಕ್ಕಳ ಓದಿಗೆ ಒತ್ತು ಕೊಟ್ಟಿದ್ದಾರೆ ಎಂದರು.