ಹುಬ್ಬಳ್ಳಿ: ಇಷ್ಟು ದಿನ ತಣ್ಣಗಿದ್ದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ನೆತ್ತರು ಹರಿದಿದ್ದು, ಮಾರಾಕಾಸ್ತ್ರಗಳು ಸದ್ದು ಮಾಡುತ್ತಿವೆ. ದುಡ್ಡಿನ ವ್ಯವಹಾರದ ಹಿನ್ನಲೆಯಲ್ಲಿ ರೌಡಿ ಶೀಟರ್ನನ್ನು ಮಾರಕಾಸ್ತ್ರದಿಂದ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅರವಿಂದ ನಗರದ ಪಿಎನ್ಟಿ ಕ್ವಾಟರ್ಸ್ ಹಿಂದಿನ ರಸ್ತೆಯಲ್ಲಿ ಘಟನೆ ನಡೆದಿದ್ದು, ಅಕ್ಬರ್ ಅಲ್ಲಾಭಕ್ಷ ಮುಲ್ಲಾ ಕೊಲೆಯಾದ ವ್ಯಕ್ತಿ. ಈತ ಮೂಲತಃ ರೌಡಿ ಶೀಟರ್ ಆಗಿದ್ದ. ಸದಾನಂದ ಕುರ್ಲಿ ಎಂಬುವವನ ಜೊತೆಗೆ ಹಣಕಾಸಿನ ವಿಷಯದಲ್ಲಿ ಗುರುವಾರ ರಾತ್ರಿ ಗಲಾಟೆ ನಡೆದಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಜಗಳ ಅತಿರೇಕಕ್ಕೆ ಹೋಗಿದೆ. ಈ ವೇಳೆ ಅಕ್ಬರ್ ಮುಲ್ಲಾ ತಾನು ತಂದಿದ್ದ ಮಚ್ಚಿನಿಂದ ಸದಾನಂದನಿಗೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಹಲ್ಲೆಯಿಂದ ತಪ್ಪಿಸಿಕೊಂಡ ಸದಾನಂದ ಅದೇ ಆಯುಧದಿಂದ ಅಕ್ಬರ್ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದಾಗಿ ಅಕ್ಬರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.