ರಷ್ಯಾ–ಉಕ್ರೇನ್ ಮಧ್ಯೆ ಸಂಘರ್ಷ ಮುಂದುವರೆದಿದೆ. ಇದರ ಮಧ್ಯೆ ಎರಡು ದೇಶಗಳಲ್ಲಿ ಭಾರತದ ಸಾವಿರಾರು ವಿದ್ಯಾರ್ಥಿಗಳು ಸಿಲುಕಿದ್ದಾರೆ. ತಾವು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಈಗಾಗಲೇ ಅನೇಕರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇದರ ಮಧ್ಯೆ ಉಕ್ರೇನ್ನಿಂದ ಭಾರತಕ್ಕೆ ವಾಪಸ್ ಆಗಿರುವ ಜಾನ್ಹವಿ, ಅಲ್ಲಿನ ಭೀಕರತೆ ಬಗ್ಗೆ ವಿವರಿಸಿದ್ದಾರೆ.
ಉಕ್ರೇನ್ ವಿರುದ್ಧ ರಷ್ಯಾ ಮಿಲಿಟರಿ ಕಾರ್ಯಾಚರಣೆ ಆರಂಭ ಮಾಡುವುದಕ್ಕೂ ಕೆಲ ದಿನ ಮುಂಚೆ ಭಾರತಕ್ಕೆ ವಾಪಸ್ ಆಗಿರುವ ಜಾನ್ಹವಿ ಖುರಾನಾ, ಅಲ್ಲಿನ ಪರಿಸ್ಥಿತಿ ಬಗ್ಗೆ ವಿವರಣೆ ನೀಡಿದ್ದು, ದಿನದಿಂದ ದಿನಕ್ಕೆ ಉಕ್ರೇನ್ ಪರಿಸ್ಥಿತಿ ಹದಗೆಡುತ್ತಿದೆ ಎಂದಿದ್ದಾರೆ. ತಾವು ಭಾರತಕ್ಕೆ ಬರುವ ಸಂದರ್ಭದಲ್ಲಿ ವಿಮಾನಯಾನ ಸೇವೆ ಪ್ರಾರಂಭವಾಗಿತ್ತು.
ಆದರೆ, ಇದೀಗ ಅದು ಸಂಪೂರ್ಣವಾಗಿ ಬಂದ್ ಆಗಿದ್ದು, ಅನೇಕ ಭಾರತೀಯ ವಿದ್ಯಾರ್ಥಿಗಳು ಅಲ್ಲಿ ಸಿಲುಕಿಕೊಂಡಿದ್ದಾರೆ. ಸಂಕಷ್ಟಕ್ಕೊಳಗಾಗಿದ್ದಾರೆಂದು ತಿಳಿಸಿದ್ದಾರೆ. ಕಳೆದ ಕೆಲ ದಿನಗಳಿಗೆ ಹೋಲಿಕೆ ಮಾಡಿದಾಗ ಉಕ್ರೇನ್ ಪರಿಸ್ಥಿತಿ ಇದೀಗ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ ಎಂದಿದ್ದಾರೆ.