ಬೆಳಗಾವಿ: ರಾಜ್ಯದಲ್ಲಿ ಬುಗಿಲೆದ್ದಿರುವ ಹಿಜಾಬ್ ವಿವಾದದ ಬಗ್ಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ. ಎಂದೂ ಇಲ್ಲದ ಹಿಜಾಬ್ ವಿವಾದ ಇವತ್ತೇಕೆ ಸೃಷ್ಟಿಯಾಗಿದೆ? ಎಂದು ಅವರು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಧರ್ಮಗಳ ಆಚಾರ ವಿಚಾರಕ್ಕೆ ಸಂವಿಧಾನದಲ್ಲೇ ಅವಕಾಶ ನೀಡಲಾಗಿದೆ.
ನಮಗೆ ಯಾವ ಬಟ್ಟೆ ಬೇಕೋ, ಅದನ್ನು ತೊಡಬಹುದು. ಇಷ್ಟವಾದ ಆಹಾರ ಸೇವಿಸಬಹುದು. ಪ್ರತಿಯೊಂದಕ್ಕೂ ಸಂವಿಧಾನದಲ್ಲಿ ಅವಕಾಶ ನೀಡಲಾಗಿದೆ. ಹಿಜಾಬ್ ಪದ್ಧತಿ ಮೊದಲಿನಿಂದ ಇದೆ. ಈಗ ಅದನ್ನು ವಿರೋಧಿಸುವುದು ಸರಿಯಲ್ಲ ಎಂದಿದ್ದಾರೆ.
ಮುಸ್ಲಿಂ ಹೆಣ್ಣುಮಕ್ಕಳು ಈಗೀಗ ಹಿಜಾಬ್ ಧರಿಸುತ್ತಿದ್ದರೆ ಅದು ತಪ್ಪು. ಕಾಲೇಜ್ ನವರು ಮುಂಚೆಯಿಂದಲೇ ಹಿಜಾಬ್ ಗೆ ಅವಕಾಶ ಕೊಟ್ಟಿದ್ದಾರೆ. ಅದು ಹಾಗೆಯೇ ನಡೆದುಕೊಂಡು ಹೋಗಲಿ. ಶಿಕ್ಷಣ ಎಲ್ಲ ಮಕ್ಕಳ ಅಧಿಕಾರ ಬದ್ಧ ಹಕ್ಕು, ಶಿಕ್ಷಣದಲ್ಲಿ ಧರ್ಮ, ಜಾತಿ ಇರಬಾರದು. ಸಿಖ್ ಸಮುದಾಯದವರು ಪೇಟ ಧರಿಸುತ್ತಾರೆ. ಅದನ್ನೀಗ ವಿರೋಧಿಸುವುದು ತಪ್ಪು. ಈಗ ಮುಸಲ್ಮಾನ ಬಾಂಧವರು ಬುರ್ಖಾ ಹಾಕುತ್ತಾರೆ, ಹಿಜಾಬ್ ತೊಡುತ್ತಾರೆ. ಗುಜರಾತ್ ನ ಹೆಣ್ಣು ಮಕ್ಕಳು ಪರದಾ ಬಿಡುತ್ತಾರೆ. ಅನೇಕ ಧರ್ಮ, ಜಾತಿ ಇರುವ ಭಾರತ ದೇಶದಲ್ಲಿ ಹಲವು ಆಚಾರ-ವಿಚಾರಗಳಿವೆ. ಇದನ್ನೆಲ್ಲಾ ಒಂದೊಂದಾಗಿ ನಾವು ಕಟ್ ಮಾಡಲಿಕ್ಕೆ ಆಗುವುದಿಲ್ಲ. ವಿವಿಧತೆಯಲ್ಲಿ ಏಕತೆ ಮೆರೆಯೋದು ನಮ್ಮ ದೇಶದ ವೈಶಿಷ್ಟ್ಯ ಎಂದರು.
ಈ ಹಿಜಾಬ್ ವಿಚಾರದಲ್ಲಿ ಖಂಡಿತವಾಗಿ ರಾಜಕಾರಣ ಆಗುತ್ತಿದೆ. ಆರಂಭ ಯಾರು ಮಾಡಿದರು, ಅಂತ್ಯ ಯಾವಾಗ ಆಗುತ್ತದೆ ಎಂಬುದು ನಮಗೆ ಬೇಕಾಗಿಲ್ಲ. ಯಾವತ್ತೂ ಇಲ್ಲದ ವಿವಾದ ಇವತ್ತು ಯಾಕೆ ಎಂಬುದಷ್ಟೇ ನಮ್ಮ ಪ್ರಶ್ನೆ ಎಂದು ಕೇಳಿದ್ದಾರೆ.