ಗದಗ: ಮುಂದಿನ ಆದೇಶದವರೆಗೆ ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಯನ್ನು ಗೆಜೆಟ್ನಲ್ಲಿ ಪ್ರಕಟಿಸದಂತೆ ಹೈಕೋರ್ಟ್ ಧಾರವಾಡ ಪೀಠ ಆದೇಶ ನೀಡಿರುವುದು ಕಾಂಗ್ರೆಸ್ ಪಾಳಯದಲ್ಲಿ ಖುಷಿ ತರಿಸಿದ್ದರೆ; ಚುನಾವಣೆಯನ್ನು ನಿಯಮಾನುಸಾರವೇ ನಡೆಸಲಾಗಿದ್ದು, ಇದಕ್ಕೆ ಸಂಬಂಧಪಟ್ಟ ಎಲ್ಲ ವಿಡಿಯೊ ದಾಖಲೆಗಳು ನಮ್ಮ ಬಳಿ ಇವೆ ಎಂಬ ಅಧಿಕಾರಿಗಳ ಹೇಳಿಕೆ ಬಿಜೆಪಿ ಪಾಳಯದಲ್ಲಿ ಆಶಾಭಾವ ಮೂಡಿಸಿದೆ.
ಗದಗ ಬೆಟಗೇರಿ ನಗರಸಭೆಗೆ ಡಿ.27ರಂದು ಚುನಾವಣೆ ನಡೆದು, ಡಿ.30ರಂದು ಫಲಿತಾಂಶ ಪ್ರಕಟವಾಗಿತ್ತು. 35 ವಾರ್ಡ್ಗಳ ಪೈಕಿ 18 ವಾರ್ಡ್ಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಸರಳ ಬಹುಮತ ಪಡೆದಿತ್ತು. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಜ.24ರಂದು ನಡೆದಿತ್ತು. ಚುನಾವಣಾಧಿಕಾರಿಯಾಗಿ ಗದಗ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಕರ್ತವ್ಯ ನಿರ್ವಹಿಸಿದ್ದರು.
ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ವೇಳೆ ಸದಸ್ಯರು ಕೈ ಎತ್ತುವ ಮೂಲಕ ಯಾರಿಗೆ ತಮ್ಮ ಬೆಂಬಲ ಎಂಬುದನ್ನು ಸೂಚಿಸಿದ್ದರು. ಅದರಂತೆ, ಬಿಜೆಪಿಯ ಉಷಾ ದಾಸರ ಅವರಿಗೆ 19 ಮಂದಿ ಕೈ ಎತ್ತಿದ್ದರು.
ಆದರೆ, ಸಹಿ ಮಾಡುವಾಗ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಚಂದಾವರಿ ಅವರಿಗೆ 19 ಮತಗಳು ಬಿದ್ದಿವೆ ಎಂದು ಕಾಂಗ್ರೆಸ್ವರು ಆರೋಪ ಮಾಡಿ ಶಾಸಕ ಎಚ್.ಕೆ.ಪಾಟೀಲ ನೇತೃತ್ವದಲ್ಲಿ ಕಾಂಗ್ರೆಸ್ ಬೆಂಬಲಿತ ಪಕ್ಷೇತರರು ಸೇರಿದಂತೆ 18 ಮಂದಿ ಫಲಿತಾಂಶ ಘೋಷಣೆಗೂ ಮುನ್ನವೇ ಹೊರ ನಡೆದಿದ್ದರು. ತದನಂತರ, ಬಿಜೆಪಿಯ ಉಷಾ ದಾಸರ ಅಧ್ಯಕ್ಷೆ, ಸುನಂದಾ ಬಾಕಳೆ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದ್ದರು.
ಬಳಿಕ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಪಾರದರ್ಶಕವಾಗಿ ನಡೆದಿಲ್ಲ. ಮರುಚುನಾವಣೆ ನಡೆಸಬೇಕು ಎಂದು ಆರೋಪ ಮಾಡಿ ಕಾಂಗ್ರೆಸ್ನ ಲಕ್ಷ್ಮಣ ಚಂದಾವರಿ ಸೇರಿದಂತೆ ಏಳು ಮಂದಿ ಹೈಕೋರ್ಟ್ ಮೆಟ್ಟಿಲೇರಿದ್ದರು.