ಬಿಜೆಪಿ ಹಿರಿಯ ಶಾಸಕ ಯತ್ನಾಳ್ (BJP MLA Yatnal) ವಿವಾದಾತ್ಮಕ ಹೇಳಿಕೆ ನೀಡುವುದರಲ್ಲಿ ಹೆಚ್ಚು ಪ್ರಸಿದ್ಧ ಎಂದರೆ ತಪ್ಪಲ್ಲ. ಕೇವಲ ವಿರೋಧ ಪಕ್ಷದವರನ್ನು ಮಾತ್ರವಲ್ಲ ತಮ್ಮದೇ ಪಕ್ಷದವರ ಬಗ್ಗೆ ಸಹ ಹೇಳಿಕೆ ನೀಡುತ್ತಾರೆ. ಈ ಬಾರಿ ಸಹ ತಮ್ಮದೇ ಪಕ್ಷದ ಸಚಿವ ಮುರುಗೇಶ್ ನಿರಾಣಿ (Murugesh Nirani) ವಿರುದ್ಧ ಕೆಂಡಕಾರಿದ್ದಾರೆ. ನಿರಾಣಿಯಾಗಲಿ- ಗುರಾಣಿಯಾಗಲಿ, ಯಾರೇ ಭ್ರಷ್ಟಾಚಾರ ಮಾಡಿದ್ರು ತನಿಖೆ ಆಗಬೇಕು. ಭ್ರಷ್ಟಾಚಾರ (Corruption) ವಿಷಯ ಬಂದ್ರೆ ನಾನು ಬಹಿರಂಗವಾಗಿ ಮಾತಾಡ್ತೀನಿ ಎಂದಿದ್ದಾರೆ. ಮೊನ್ನೆ ಅಷ್ಟೇ ರಾಜ್ಯ ಅಧ್ಯಕ್ಷರು ಬಹಿರಂಗ ಹೇಳಿಕೆ ಕೊಡದಂತೆ ಸೂಚಿಸಿದ್ದರೂ ಸಹ ಯತ್ನಾಳ್ ಮಾತ್ರ ಹಿಂದೆ ಮುಂದೆ ನೋಡದೆ ಮಾತನಾಡುತ್ತಿದ್ದಾರೆ.
ಮೂರನೇ ಮಠ ಅಂದ್ರೆ ಮೂರಾಬಟ್ಟೆ ಆಗತ್ತೆ. ಮಠ ಕಟ್ಟುವವರು ಮಣ್ಣು ತಿಂತಾರೆ. ಮಠ ಕಟ್ಟೋದು ಬ್ಯಾಂಕಿನ ಬ್ರಾಂಚಾ ಎಂದು ನಿರಾಣಿ ವಿರುದ್ಧ ಕಿಡಿಕಾರಿದ್ದಾರೆ. ಎಲ್ಲ ವಿಚಾರವೂ ಕೂಡ ಹೈಕಮಾಂಡ್ ಗೆ ಗೊತ್ತಿದೆ. ಯಾವ ರೀತಿ ಸಮಾಜ ಒಡೆಯುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಯಾರೂ ಉದ್ದಾರ ಆಗಿಲ್ಲ. ಹೀಗೆ ಮಠ ಕಟ್ಟುತ್ತಿದ್ದರೆ ರಾಜಕೀಯ ಅಂತ್ಯವಾಗುವುದು ಖಚಿತ. ಧರ್ಮದಲ್ಲಿ ಕೈ ಹಾಕಿದರೆ ಅವರು ಅಂತ್ಯವಾಗ್ತಾರೆ ಎಂಬುದನ್ನ ಮರೆಯಬಾರದು. ಇದನೆಲ್ಲ ಮಾಡಿ ನಿರಾಣಿ ಯಾವ ರಾಜ್ಯದ ಸಿಎಂ ಆಗ್ತಾರೆ ಪಾಕಿಸ್ತಾನದ್ದಾ ಎಂದು ಪ್ರಶ್ನಿಸಿರುವ ಯತ್ನಾಳ್, ಮುಖ್ಯಮಂತ್ರಿ ಸ್ಥಾನ ಖಾಲಿಯೇ ಇಲ್ಲ. ಬೊಮ್ಮಾಯಿಯವರೇ ಸಿಎಂ ಆಗಿರ್ತಾರೆ ಎಂದಿದ್ದಾರೆ.