ರಾಮದುರ್ಗ ತಾಲೂಕಿನ ಬೋಚಬಾಳ ಗ್ರಾಮದಲ್ಲಿ 21 ಮಕ್ಕಳಿಗೆ ರೂಬೆಲ್ಲಾ ಲಸಿಕೆ ನೀಡಿದ್ದಾರೆ. ಈ ವೇಳೆ ಪ್ರತ್ಯೇಕ ಲಸಿಕಾ ಕೇಂದ್ರ ಮಾಡಲಾಗಿತ್ತು. ಇದಕ್ಕೂ ಮತ್ತು ಕೋವಿಡ್ಗೂ ಯಾವುದೇ ರೀತಿ ಸಂಬಂಧ ಇಲ್ಲ. ಲಸಿಕೆ ವಿತರಣೆಯಲ್ಲಿ ಯಾರೇ ನಿರ್ಲಕ್ಷ್ಯ ವಹಿಸಿದ್ದರೂ ಖಂಡಿತವಾಗಲೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಡಿಎಚ್ಓ ಡಾ.ಶಶಿಧರ ಮುನ್ಯಾಳ ಎಚ್ಚರಿಸಿದ್ದಾರೆ.
ರಾಮದುರ್ಗ ತಾಲೂಕಿನ ಮೂವರು ಮಕ್ಕಳು ಜಿಲ್ಲಾಸ್ಪತ್ರೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಕುರಿತು ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿಎಚ್ಓ ಡಾ.ಶಶಿಧರ ಮುನ್ಯಾಳ ಅವರು ಜನವರಿ 12ರಂದು ಬೋಚಬಾಳ ಗ್ರಾಮದಲ್ಲಿ ಒಟ್ಟು 21 ಮಕ್ಕಳಿಗೆ ರೂಬೆಲ್ಲಾ ಲಸಿಕೆ ನೀಡಿದ್ದಾರೆ. ಈ ವೇಳೆ ಪ್ರತ್ಯೇಕ ಲಸಿಕಾ ಕೇಂದ್ರ ಮಾಡಲಾಗಿತ್ತು. ಇದಕ್ಕೂ ಮತ್ತು ಕೋವಿಡ್ಗೂ ಸಂಬಂಧ ಇಲ್ಲ. ಎಂಆರ್ ಲಸಿಕೆ ತೆಗೆದುಕೊಂಡ 4 ಮಕ್ಕಳು ಅಸ್ವಸ್ಥರಾಗಿ ಉಸಿರಾಟ, ವಾಂತಿಭೇದಿ ಕಂಡು ಬಂದಿದೆ. ಈ ವೇಳೆ ಒಂದು ಮಗು ರಾಮದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ಮಗು ಸಾವನ್ನಪ್ಪಿದೆ. ಇನ್ನುಳಿದ ಎರಡು ಮಕ್ಕಳನ್ನು ಬಿಮ್ಸ ಆಸ್ಪತ್ರೆಗೆ ಕಳಿಸಿದ್ರು. ಇನ್ನೊಂದು ಮಗುವನ್ನು ರಾಮದುರ್ಗದಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು ಎಂದರು.
ಇನ್ನು ಮಲಮೂತ್ರ, ರಕ್ತದ ಮಾದರಿಗಳನ್ನು ಹೆಚ್ಚಿನ ತಪಾಸಣೆಗೆ ರಾಜ್ಯ ಮಟ್ಟಕ್ಕೆ ಕಳಿಸಿಕೊಟ್ಟಿದ್ದೇವೆ. ಅದೇ ರೀತಿ ದೆಹಲಿ ಹತ್ತಿರದ ಕಸೂಲಿಯ ವ್ಯಾಕ್ಸಿನ್ ಟೆಸ್ಟಿಂಗ್ ಸೆಂಟರ್ಗೆ ಬಂದಿರುವ ವ್ಯಾಕ್ಸಿನ್ ಬ್ಯಾಚ್ ಕಳಿಸಿ ಕೊಟ್ಟು ಹೆಚ್ಚಿನ ರೀತಿಯ ತಪಾಸಣೆ ಮಾಡುತ್ತೇವೆ. ಪ್ರಾಥಮಿಕ ಹಂತದ ಮಾಹಿತಿ ಪ್ರಕಾರ ವ್ಯಾಕ್ಸಿನೇಶನ್ ಮಾಡುವ ಪ್ರಕ್ರಿಯೆ, ಶಿಷ್ಟಾಚಾರ ಯಾವ ರೀತಿ ಇತ್ತು..? ವ್ಯಾಕ್ಸಿನ್ ಸ್ಟೋರೇಜ್ ಯಾವ ರೀತಿ ಇತ್ತು..? ಎಂಬ ವಿಚಾರದ ಬಗ್ಗೆ ಇವ್ಯಾಲುವೇಶನ್ ಮಾಡಿ ತಕ್ಷಣವೇ ವರದಿ ಸಲ್ಲಿಸುವಂತೆ ಆರ್ಸಿಎಚ್ ಅವರಿಗೆ ಸೂಚನೆ ಕೊಟ್ಟಿದ್ದೇನೆ. ಡಬ್ಲುಎಚ್ಓನ ಎಸ್ಎಮ್ ಶಿವಲಿಂಗಯ್ಯ ಅವರಿಂದಲೂ ವರದಿ ತರಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಸಿದರು.