ಬೆಂಗಳೂರು, ಆ.24-ವಿಧಾನಸಭಾ ಸಭಾಂಗಣ ಹಾಗೂ ವಿಧಾನ ಪರಿಷತ್ತಿನ ಸಭಾಂಗಣದಲ್ಲೇ ಈ ಬಾರಿಯ ಮಳೆಗಾಲದ ಅಧಿವೇಶನ ನಡೆಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ತಿಳಿಸಿದರು.
ಪ್ರಸಕ್ತ 15ನೇ ವಿಧಾನಸಭೆಯ 7ನೇ ಅಧಿವೇಶನ ನಡೆಸುವ ಸಾಧ್ಯಾಸಾಧ್ಯತೆ ಕುರಿತಂತೆ ಇಂದು ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು , ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ವಿಜಯಭಾಸ್ಕರ್, ವಿಧಾನಸಭೆಯ ಹಿರಿಯ ಅಧಿಕಾರಿಗಳೊಂದಿಗೆ ವಿಧಾನಸಭೆಯ ಸಭಾಂಗಣವನ್ನು ವೀಕ್ಷಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಅಧಿವೇಶನಕ್ಕೆ ಸಾಮಾಜಿಕ ಅಂತರ ಕಾಪಾಡಿಕೊಂಡು, ಫೇಸ್ ಶೀಲ್ಡ್ , ಮಾಸ್ಕ್ ಕಡ್ಡಾಯಗೊಳಿಸಲಾಗುವುದು. ಒಟ್ಟು 274 ಸೀಟುಗಳಿವೆ. ಸೀಟ್ ಮಧ್ಯೆ ಗಾಜಿನ ಪರದೆ ಹಾಕ್ತೇವೆ. ಅಧಿಕಾರಿಗಳು, ಪ್ರಧಾನ ಕಾರ್ಯದರ್ಶಿಗಳಿಗೆ ಮಾತ್ರ ಅಧಿವೇಶನಕ್ಕೆ ಅವಕಾಶವಿದೆ.
ಪತ್ರಕರ್ತರ ಗ್ಯಾಲರಿ ಬಗ್ಗೆ ಪತ್ರಕರ್ತರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡಲಾಗುವುದು ಎಂದರು. ಕೋವಿಡ್ ಹಿನ್ನೆಲೆಯಲ್ಲಿ ಪ್ರೇಕ್ಷಕರ ಗ್ಯಾಲರಿಗೆ ನಿರ್ಬಂಧ ವಿಧಿಸಲಾಗುವುದು.