ಬೆಳಗಾವಿಯ ಸುವರ್ಣ ಗಾರ್ಡನ್ನಲ್ಲಿ ಪ್ರತಿಭಟನೆ ನಡೆಸಿದ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರ ಗುತ್ತಿಗೆ ನೌಕರರು ಸೇವಾ ಭದ್ರತೆ, ಹೊರ ಸಿಬ್ಬಂದಿಗಳ ಬಾಕಿ ವೇತನ ಮತ್ತು ಲಾಕ್ಡೌನ್ ಅವಧಿಯ ವೇತನ ಕೂಡಲೇ ಸಂದಾಯ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ನಮ್ಮ ಇನ್ನ್ಯೂಸ್ ಜೊತೆಗೆ ಮಾತನಾಡಿದ ಸಂಘದ ಮುಖಂಡ ಮರಡಿ ಎಮ್. ಚಂಬಯ್ಯನಾಯ್ಕ ಸೇವೆಯಿಂದ ಬಿಡುಗಡೆಗೊಳಿಸಲಾದ ಹಾಸ್ಟೆಲ್ ಹೊರ ಗುತ್ತಿಗೆ ಸಿಬ್ಬಂದಿಗಳನ್ನು ನಿವೃತ್ತಿಯ ವರೆಗೆ ಸೇವೆಯಲ್ಲಿ ಮುಂದುವರೆಸಿ, ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿ ಶೆ.25 ರಷ್ಟು ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದರು. ಕಡ್ಡಾಯವಾಗಿ ಸಿಬ್ಬಂದಿಗಳಿಗೆ ವಾರದ ರಜೆಯನ್ನು ಕೊಡಬೇಕು. ಇಎಸ್ಐ ಮತ್ತು ಪಿಎಫ್ ಹಣವನ್ನು ಹೊರಗುತ್ತಿಗೆ ನೌಕರರ ಖಾತೆಗೆ ಹಾಕಬೇಕು. ಎಲ್ಲಾ ಹಾಸ್ಟೆಲ್ ಹೊರ ಗುತ್ತಿಗೆ ಸಿಬ್ಬಂದಿಗಳಿಗೆ ನಿವೃತ್ತಿಯವರೆಗೆ ಸೇವಾ ಭದ್ರತೆ ಕೊಡಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಆಗ್ರಹಿಸಿದರು.